ಕಾಫಿ ಗಿಡಗಳ ಮಧ್ಯೆ ಗಾಂಜಾ ಬೆಳೆ, ಓರ್ವ ವಶಕ್ಕೆ
ಚಿಕ್ಕಮಗಳೂರು : ಕಾಫಿ ತೋಟವೊಂದರಲ್ಲಿ ಕಾಫಿ ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದ ಆರೋಪದ ಮೇಲೆ ತೋಟದ ಮಾಲಿಕನನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಸಂಜೆ ತಾಲೂಕಿನ ಕೆಳಹೊಲಗದ್ದೆ ಗ್ರಾಮದಲ್ಲಿ ನಡೆದಿದೆ.
ಬಂಧಿತ ಅರೋಪಿಯನ್ನು ಕೆಳಹೊಲಗದ್ದೆ ಗ್ರಾಮದ ನಿವಾಸಿ ರಾಜೇಂದ್ರ ಎಂದು ಗುರುತಿಸಲಾಗಿದೆ. ಆರೋಪಿ ರಾಜೇಂದ್ರ ಕಾಫಿ ತೋಟದ ಕಾಫಿ ಗಿಡಗಳ ಮಧ್ಯೆ ಕೆಲ ತಿಂಗಳುಗಳ ಹಿಂದೆ ಗಾಂಜಾ ಗಿಡಗಳನ್ನು ಬೆಳೆದಿದ್ದ. ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ಕಾಫಿ ತೋಟದ ಮೇಲೆ ದಿಢೀರ್ ದಾಳಿ ನಡೆಸಿದಾಗ ತೋಟದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ.
ದಾಳಿ ವೇಳೆ 100 ಗ್ರಾಂ ಹಸಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ.