ಪಾಕ್ ಪರ ಘೋಷಣೆ ; ಅಬ್ದುಲ್ ಕಬೀರ್ ಖಂಡನೆ
ಚಿಕ್ಕಮಗಳೂರು : ರಾಜ್ಯಸಭಾ ಚುನಾವಣೆಯ ಫಲಿತಾಂಶ ವೇಳೆಯಲ್ಲಿ ವಿಧಾನಸೌಧ ಸಭಾಂಗಣದಲ್ಲಿ ಕಾಂಗ್ರೆಸ್ನ ಕೆಲವು ಮುಖಂಡರುಗಳು ಪಾಕಿಸ್ತಾನ ಪರವಾಗಿ ಜೈಕಾರ ಹಾಕಿರುವುದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಅಬ್ದುಲ್ ಕಬೀರ್ ಹೇಳಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಯಾವುದೇ ಸಮುದಾಯವಾಗಲೀ ಶತ್ರು ದೇಶದ ಪರವಾಗಿ ಜೈಹಾಕ ಹಾಕಿರುವುದು ಸೂಕ್ತವಲ್ಲ. ಕೂಡಲೇ ಇಂತಹವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ನಾಸೀರ್ ಹುಸೇನ್ರ ಬೆಂಬಲಿಗರು ಗೆಲುವಿನ ಸಂಭ್ರಮಾಚರಣೆಯಲ್ಲಿರುವಾಗ ಪಾಕ್ಗೆ ಜೈಕಾರ ಹಾಕಿರುವುದು ತಲೆತಗ್ಗಿಸುವಂತಹ ವಿಷಯ. ಈ ಹಿಂದಿರುವ ವ್ಯಕ್ತಿಗಳ ವಿರು ದ್ಧವೂ ಸಮಗ್ರ ತನಿಖೆ ನಡೆಸುವ ಮೂಲಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ನಾಸೀರ್ ಹುಸೇನ್ರ ಬಳಿ ವರದಿಗಾಗಿ ತೆರಳಿದ್ದ ಪತ್ರಿಕಾಮಿತ್ರರೊಂದಿಗೆ ಏಕವಚನದಲ್ಲಿ ಸಂಬೋಧಿಸಿ ಅವರನ್ನು ನಿಂದಿಸಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಜೊತೆಗೆ ಪಾಕ್ ಪರ ಘೋಷಣೆ ಕೂಗಿರುವ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.