ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ | ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು ಸುಪ್ರೀಂಕೋರ್ಟ್‌ಗೆ ಐ.ಎ.

Written by malnadtimes.com

Published on:

SHIVAMOGGA | ಅರಣ್ಯ ಹಕ್ಕು ಕಾಯ್ದೆ ಅಡಿ ರಾಜ್ಯದಾದ್ಯಂತ ಸಲ್ಲಿಸಲಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದು, ಈ ಎಲ್ಲ ಅರ್ಜಿಗಗಳ ಪುನರ್ ಪರಿಶೀಲನೆ ಮಾಡಿ, ಅರ್ಜಿದಾರರಿಗೆ ಸ್ವಾಭಾವಿಕ ನ್ಯಾಯದ ಅಡಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು, ಈ ಪ್ರಕ್ರಿಯೆ ಪೂರ್ಣವಾಗುವತನಕ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮನೆ ಬೀಗ ಮುರಿದು ನಗ-ನಾಣ್ಯ ದೋಚಿದ ಖದೀಮರು !

ಶಿವಮೊಗ್ಗದ ಅರಣ್ಯ ಇಲಾಖೆಯ ಶ್ರೀಗಂಧ ಸಭಾಂಗಣದಲ್ಲಿಂದು ನಡೆದ ಶಿವಮೊಗ್ಗ ವೃತ್ತದ ಅರಣ್ಯಾಧಿಕಾರಿಗಳೊಂದಿಗಿನ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2005ರ ಡಿಸೆಂಬರ್ 13ನೇ ತಾರೀಖಿಗೆ ಮುನ್ನ ಅರಣ್ಯ ವಾಸಿಗಳಾಗಿದ್ದ ಎಲ್ಲ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆಯಡಿ ಪರಿಹಾರ ಸಿಗಲೇಬೇಕು, ಅದೇ ರೀತಿ ಇತರ ಹಿಂದುಳಿದವರು ಈ ದಿನಾಂಕಕ್ಕೆ ಮುನ್ನ ಅರಣ್ಯದಲ್ಲಿ ಜೀವನೋಪಾಯಕ್ಕಾಗಿಯೇ ನೆಲೆಸಿದ್ದಲ್ಲಿ ನಿಯಮಾನುಸಾರ ಅವರಿಗೆ ಹಕ್ಕು ನೀಡಬೇಕಾಗುತ್ತದೆ. ಪ್ರಸ್ತುತ 3 ತಲೆಮಾರು ಅಂದರೆ 75 ವರ್ಷ ಅವರು ಅಲ್ಲಿದ್ದರು ಎಂದು ಸಾಬೀತು ಪಡಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲೆಂದರಲ್ಲಿ ಕಾರ್ ನಿಲ್ಲಿಸಿ ಎಣ್ಣೆ ಪಾರ್ಟಿ, ಮಳೆಯ ಚಳಿಯಲ್ಲಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ ಪಿಎಸ್ಐ ರೇಣುಕಾ
Source:BYR

ಶರಾವತಿ ಸಂತ್ರಸ್ತರ ಸಮಸ್ಯೆ ಚರ್ಚೆ :

ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್‌ನಲ್ಲಿ ಐ.ಎ. ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಭೂಮಿಯನ್ನು ಮಾನ್ಯ ಮಾಡಿ, ಸಂತ್ರಸ್ತರ ಸಮಸ್ಯೆ ಶೀಘ್ರ ಬಗೆಹರಿಸಲು ಉತ್ತಮ ವಕೀಲರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡುವಂತೆ ಸೂಚಿಸಿದರು.

2015ರ ನಂತರದ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ :

1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳ ಪೈಕಿ ಪಟ್ಟಾಭೂಮಿ ಮತ್ತು ಒತ್ತುವರಿ ಎರಡೂ ಸೇರಿ 3 ಎಕರೆ ಮೀರದವರ ಮತ್ತು ಇದೇ ಭೂಮಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರ್ಕಾರ ಈ ಹಿಂದೆಯೇ ನಿರ್ಧಾರ ಮಾಡಿದೆ. ಬಡ ಜನರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪ್ರಕೃತಿ ಪರಿಸರ, ಅರಣ್ಯ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪರಿಸರವೂ ಉಳಿಯಬೇಕು, ಜೀವನೋಪಾಯವೂ ಇರಬೇಕು. ಹೀಗಾಗಿ ಹೊಸದಾಗಿ ಯಾರೇ ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿದು, ಒತ್ತುವರಿ ಮಾಡಿದರೆ, ನಿಯಮಾನುಸಾರ ಅನುಮತಿ ಪಡೆದು ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂಡೀಕರಣ ಮಾಡಿಸಲು ಸೂಚನೆ:

ಕಂದಾಯ ಇಲಾಖೆಯಿಂದ ಅರಣ್ಯಕ್ಕಾಗಿ ಮತ್ತು ನೆಡುತೋಪಿಗಾಗಿ ಹಲವು ದಶಕಗಳ ಹಿಂದೆಯೇ ಭೂಮಿ ಮಂಜೂರಾಗಿದ್ದರೂ, ಹಲವು ಪ್ರಕರಣಗಳಲ್ಲಿ ಇನ್ನೂ ಇಂಡೀಕರಣ ಆಗಿಲ್ಲ, ಅದೇ ರೀತಿ ಮೀಸಲು ಅರಣ್ಯ ಪ್ರದೇಶವೂ ಇಂಡೀಕರಣ ಆಗಿಲ್ಲ. ಅಲ್ಲದೆ ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆಯೂ ಅಕ್ರಮ ಮಂಜೂರಾತಿ ಆಗುತ್ತಿದೆ. ಹೀಗಾಗಿ ಕೂಡಲೇ ಅರಣ್ಯ ಎಂದು ಮ್ಯುಟೇಷನ್ ಮಾಡಿಸುವಂತೆ ಸೂಚಿಸಿದರು.

ಬಿ.ಎಚ್. ರಸ್ತೆಗೆ ಅರಣ್ಯ ನಾಶ, ವರದಿ ನೀಡಲು ಸೂಚನೆ :

ಬಿ.ಎಚ್. ರಸ್ತೆ ಪಥ ಬದಲಾವಣೆಯಿಂದಾಗಿ ಕರಡಿಬೆಟ್ಟ, ಅರಣ್ಯ ಬಚ್ಚಲು ಅರಣ್ಯಗಳು ನಾಶವಾಗುತ್ತವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದು, ಹಾಲಿ ಇರುವ ರಸ್ತೆ ಅಗಲೀಕರಣ ಮಾಡುವ ಮೂಲಕ ಅರಣ್ಯ ನಾಶ ತಪ್ಪಿಸಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಸೆಕ್ಷನ್ 4 ಅನ್ನು 17 ಮಾಡುವಲ್ಲಿ ವಿಳಂಬ ಸಹಿಸಲ್ಲ : ಖಂಡ್ರೆ

ಈಗಾಗಲೇ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅರಣ್ಯ ಸಚಿವರು, ಕಾಲಮಿತಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಶಾರದಾ ಪೂರ್ಯಾನಾಯಕ್, ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.

ಶೀಘ್ರವೇ ಆಯ್ಕೆಯಾದ 850 ಅರಣ್ಯ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ

SHIVAMOGGA | ಅರಣ್ಯ ಇಲಾಖೆಯಲ್ಲಿ ವನ ಪಾಲಕರಾಗಿ ಆಯ್ಕೆಯಾಗಿರುವ 310 ಅಭ್ಯರ್ಥಿಗಳಿಗೆ ಮತ್ತು 540 ಅರಣ್ಯ ರಕ್ಷಕರಿಗೆ ಮುಖ್ಯಮಂತ್ರಿಗಳಿಂದ ನೇಮಕಾತಿ ಪತ್ರ ವಿತರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಅರಣ್ಯ ಅಧಿಕಾರಿಗಳ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ ಎಂಬ ಮನವಿಗೆ ಉತ್ತರಿಸಿ, ಈಗಾಗಲೇ ನೇಮಕಾತಿ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದ್ದು, ಶೀಘ್ರವೇ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.

ಎಲ್ಲೆಂದರಲ್ಲಿ ಕಾರ್ ನಿಲ್ಲಿಸಿ ಎಣ್ಣೆ ಪಾರ್ಟಿ, ಮಳೆಯ ಚಳಿಯಲ್ಲಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ ಪಿಎಸ್ಐ ರೇಣುಕಾ

Leave a Comment