ಪಿಂಚಣಿ ಅದಾಲತ್ ; ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ
ರಿಪ್ಪನ್ಪೇಟೆ: ದುಡಿಯಲು ಸಾಧ್ಯವಿಲ್ಲದ ಸಮಯದಲ್ಲಿ ಸರ್ಕಾರ ಅಲ್ಪ ಮೊತ್ತದ ಹಣವನ್ನು ವಿವಿಧ ಯೋಜನೆಗಳಡಿಯಲ್ಲಿ ನೀಡುತ್ತಿದ್ದು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಜೀವನೋಪಾಯ ಮಾಡಿಕೊಳ್ಳುವಂತೆ ಉಪತಹಶೀಲ್ದಾರ್ ಹುಚ್ಚರಾಯಪ್ಪ ಕರೆ ನೀಡಿದರು.
ಕೆರೆಹಳ್ಳಿ ಹೋಬಳಿಯ ರಿಪ್ಪನ್ಪೇಟೆ ನಾಡಕಛೇರಿಯಲ್ಲಿ ಉಪತಹಶೀಲ್ದಾರ್ರವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶದ ಪ್ರತಿಯನ್ನು ವಿತರಿಸಿ ಅವ ಮಾತನಾಡಿದರು.
ಈ ಪಿಂಚಣಿ ಅದಾಲತ್ನಲ್ಲಿ ಪಹಣಿ ತಿದ್ದುಪಡಿ, ಪೌತಿಖಾತೆ ಬದಲಾವಣೆ, ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ 4, ವಿಧವಾ ವೇತನ 4, ಅಂಗವಿಕಲ ವೇತನ 2, ಸಂಧ್ಯಾ ಸುರಕ್ಷ 6, ಪರಿಹಾರ ಯೋಜನೆಗಳ ಮಂಜೂರಾತಿ ಕೋರಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಸ್ಥಳದಲ್ಲೇ ಮಂಜೂರಾತಿ ಮಾಡಿ ಆದೇಶವನ್ನು ನೀಡಲಾಯಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಾಡಕಛೇರಿಯ ರೆವಿನ್ಯೂ ಇನ್ಸ್ಪೆಕ್ಟರ್ ಅಫ್ರೋಜ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ,
ಯೋಗೀಶ್, ಇಂದ್ರಮ್ಮ ಇನ್ನಿತರ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು.