ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗೊಂದಲದ ಗೂಡು ; ಕೇಳುವವರಿಲ್ಲ ಆಯ್ಕೆಯಾದ ಅಭ್ಯರ್ಥಿಗಳ ಗೋಳು !

0 49

ಹೊಸನಗರ : 2022 ರಲ್ಲಿ 15000 ಪದವೀಧರ ಪ್ರಾಥಮಿಕ‌ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿತ್ತು. ಇದರಲ್ಲಿ 70,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 13,351 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಇಲಾಖೆಯೆ ಸೃಷ್ಠಿಸಿದ ಕೆಲವು ಗೊಂದಲದ ಅಸ್ಪಷ್ಟ ನಿಯಮಗಳ ಕಾರಣಕ್ಕಾಗಿ 300-400 ಅಭ್ಯರ್ಥಿಗಳು ನ್ಯಾಯಲಯದ ಮೊರೆ ಹೋಗಿದ್ದಾರೆ. W/P 23752/2022, W/A 305/2023 ಮತ್ತು W/P 5009/2023 ನಲ್ಲಿ ರಿಟ್ ಅರ್ಜಿಯ ಮತ್ತು ಮೇಲ್ಮನವಿಯ ವಿಚಾರಣೆ ರಾಜ್ಯ ಉಚ್ಚ ನ್ಯಾಯಲಯದಲ್ಲಿ ನಡೆಯುತ್ತಿದ್ದು. ಈ ವಿಚಾರಣೆಗಳ ಮಧ್ಯಂತರ ಆದೇಶವು ಸುಮಾರು 13,000 ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯ ವಿಳಂಬಕ್ಕೆ ಕಾರಣವಾಗಿದೆ.

ಸರ್ಕಾರಿ ಹುದ್ದೆಗೆ ಆಯ್ಕೆಯಾದ ಕಾರಣಕ್ಕೆ ತಾವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಡುತಿದ್ದ ಕೆಲಸಗಳನ್ನು ಕಳೆದುಕೊಂಡು ಜೀವನ ನಿರ್ವಾಹಣೆಗೆ ಅನಿವಾರ್ಯವಾಗಿ ಬಸ್ ಏಜೆಂಟ್ ರುಗಳಾಗಿ, ಉದ್ಯೋಗ ಖಾತ್ರಿ ಇತ್ಯಾದಿ ಕೆಲಸಗಳ ಮೊರೆ ಹೋಗುತ್ತಿದ್ದು, ಹಲವು ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ. ಜೊತೆಗೆ ಈಗಾಗಲೆ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳಾಗಿದ್ದು, ಸುಮಾರು 56,000 ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಕುರಿತು ಪ್ರತಿ ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ.

ಈಗಾಗಲೆ ಸಾಕಾಷ್ಟು ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಕರು ಇಲ್ಲದೆ ದಾಖಲಾತಿ ಇಳಿಮುಖವಾಗಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಇದು ಗುಣಮಟ್ಟದ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ.

ಈ ಶಿಕ್ಷಕರ ನೇಮಕಾತಿಯು ಅತಿ ದೊಡ್ಡ ಮಟ್ಟದ ಶಿಕ್ಷಕರ ನೇಮಕಾತಿಯಾಗಿದ್ದು, ನೇಮಕಾತಿ ತ್ವರಿತವಾಗಿ ಪೂರ್ಣಗೊಂಡಲ್ಲಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯ ಹೊರೆಯನ್ನು ಕಡಿಮೆ ಮಾಡುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಈಗಾಗಲೆ ಶಿಕ್ಷಕರ ಕೊರತೆಯಿಂದ ಸಾಕಷ್ಟು ಶಾಲೆಗಳು ಮುಚ್ಚಿದ್ದರು ಇಲಾಖೆ ಮತ್ತು ಸರ್ಕಾರ ನ್ಯಾಯಾಲಯದಲ್ಲಿರುವ ನೇಮಕಾತಿಯನ್ನು ಬೇಗ ಬಗೆಹರಿಸಿ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸುವ ಇರಾದೆಯನ್ನು ಹೊಂದಿದಂತಿಲ್ಲ. ಕಾರಣ ಮತ್ತೆ ಹೊಸ ಸಮಸ್ಯೆಯನ್ನು ಸೃಷ್ಟಿಸಿ ಅಭ್ಯರ್ಥಿಗಳನ್ನು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುತ್ತಿರುವುದು.

ಹೌದು, ಮೇ, 2023 ರಿಂದ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ನೈಜತೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದರು ಈ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದೆ. ಜೊತೆಗೆ ಜಾತಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಲು ಸೂಚಿಸುತ್ತಿರುವುದು ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. 2016, 2017 ಮತ್ತು 2019 ರ ನೇಮಕಾತಿಗಳಲ್ಲಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲದ ನಿಯಮ ಈಗೇಕೆ? ಎಂಬ ಪ್ರಶ್ನೆ ಅಭ್ಯರ್ಥಿಗಳಲ್ಲಿ ಮೂಡಿದೆ. ಅಲ್ಲದೆ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಯಾವುದೆ ಅಂಕ ಮತ್ತು ಅರ್ಜಿ ಸಲ್ಲಿಕೆ ಶುಲ್ಕಗಳ ವಿನಾಯ್ತಿಯನ್ನು ಪಡೆದಿಲ್ಲ.

ಹಿಂದಿನ ಶಿಕ್ಷಣ ಆಯುಕ್ತರಾದ ಡಾ. ವಿಶಾಲ್ ರವರು ಕೂಡ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಡತೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಹೊರತುಪಡಿಸಿ ಯಾವುದೆ ಸಿಂಧುತ್ವ ಇರುವುದಿಲ್ಲವೆಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಅನುಸೂಚಿ/ಕಾಯ್ದೆ 1990, 1992 ಮತ್ತು 1994 ರಲ್ಲಿ ಕೂಡ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ಮತ್ತು ಹೆಚ್ಚು ಅಂಕಗಳೊಂದಿಗೆ ರ‍್ಯಾಂಕ್ ಬಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಸಾಮಾನ್ಯ ಅರ್ಹತೆಯಲ್ಲಿಯೆ ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಕೂಡ ಈ ಹಿಂದಿನ ಪ್ರಕರಣಗಳಲ್ಲಿ (1814/2020 ಮತ್ತು 4602/2017) ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ತೀರ್ಪನ್ನು ನೀಡಿದ್ದರು ಇಲಾಖೆಯು ಹಿಂದುಳಿದ ವರ್ಗಗಳ ಇಲಾಖೆಯ 2021 ರಲ್ಲಿನ ಅನಧಿಕೃತ ಟಿಪ್ಪಣಿಯೊಂದನ್ನು ಮುಂದಿಟ್ಟು ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಬೇಕೆಂದು ಹೇಳುತ್ತಿದೆ.

ಅಭ್ಯರ್ಥಿಗಳು ಹಲವು ದಾಖಲೆಗಳನ್ನು ನೀಡಿ ಈ ಯೋಚನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡರು ಇಲಾಖೆಯ ಅಧಿಕಾರಿಗಳು ಇದುವರೆಗು ಯಾವುದೇ ನಿರ್ಧಾರಕ್ಕೆ ಬರದಿರುವುದು ಅಭ್ಯರ್ಥಿಗಳಲ್ಲಿ ಬೇಸರವನ್ನು ಮೂಡಿಸಿದೆ ಮತ್ತು ಕೆಲವು ಅಭ್ಯರ್ಥಿಗಳು ನ್ಯಾಯಾಂಗದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಇದರಿಂದ ಈಗಾಗಲೆ ಆಮೆಗತಿಯಲ್ಲಿರುವ ನೇಮಕಾತಿಗೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ.

ಇಲಾಖೆಯು ಆದಷ್ಟು ಬೇಗ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಒಂದು ಸ್ಪಷ್ಟ ನಿರ್ಧಾರಕ್ಕೆ ಬರದದಿದ್ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಷ್ಟೆ ಅಲ್ಲದೆ ಈಗಾಗಲೆ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳಿಗು ನಷ್ಟವಾಗಲಿದೆ. ಸರ್ಕಾರಿ ವಕೀಲರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇಲಾಖೆಯನ್ನು ಭಾವಿ ಶಿಕ್ಷಕರು ಆಗ್ರಹಿಸಿದ್ದಾರೆ.

ಇದು ಹೀಗೆ ವಿಳಂಬವಾದಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಭಾವಿ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!