ಮಹಾಶಿವರಾತ್ರಿ ಅಂಗವಾಗಿ ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ರಿಪ್ಪನ್ಪೇಟೆ : ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗುಳಿ ಶಂಕರದ ಶಂಕರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 8ರಂದು ದೇವರ ಸನ್ನಿಧಿಯಲ್ಲಿ ಶಿವಮೊಗ್ಗದ ಹಂದಲಸೆ ರಾಘವೇಂದ್ರ ಭಟ್ಟರ ಪೌರೋಹಿತ್ಯದಲ್ಲಿ ನಿತ್ಯ ಪೂಜೆ ಸಹಿತ, ರುದ್ರಾಭಿಷೇಕ, ಕುಂಭಾಭಿಷೇಕ, ಮಹಾ ಹೋಮ ಪೂರ್ಣಾಹುತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಲಘು ಫಲಹಾರವನ್ನು ಏರ್ಪಡಿಸಲಾಗಿದೆ.
ಅದೇ ದಿನ ಸಂಜೆ ಶಾಂತಪುರದ ಕೃಷ್ಣಮೂರ್ತಿ ಭಟ್ ಇವರ ನೇತೃತ್ವದಲ್ಲಿ ಸಾಮೂಹಿಕ ರುದ್ರ ಹೋಮ ಏರ್ಪಡಿಸಲಾಗಿದೆ. ನಂತರ ಬೆಂಗಳೂರಿನ ಕೆ.ಆರ್.ಪುರಂನ ವಾಗ್ದೇವಿ ನೃತ್ಯಲಯದ ದೀಪ್ತಿ ತಂಡದ ಭರತನಾಟ್ಯ ಹಾಗೂ ರಾತ್ರಿ ಹತ್ತಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಿತ್ತಲಗದ್ದೆ ಕಿಲಾರ ಮಹಾ ಗಣಪತಿ ಯಕ್ಷಗಾನ ಮಂಡಳಿ ಇವರಿಂದ ದಕ್ಷ ಯಜ್ಞ ಕೃಷ್ಣ ಲೀಲೆ ಸುಂದರ ಪೌರಾಣಿಕ ಯಕ್ಷಗಾನ ಏರ್ಪಡಿಸಲಾಗಿದೆ.
ಮಾರ್ಚ್ 9ರ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ನಾಗಭೂಷಣ್ ಭಟ್ ಹಾಗೂ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ತಿಳಿಸಲಾಗಿದೆ.