ರೈತರು ಮತ್ತು ಕೃಷಿ ಪದವೀಧರರು ಈ ದೇಶದ ಬೆನ್ನೆಲುಬು ; ಕಲಗೋಡು ರತ್ನಾಕರ್

0 605

ರಿಪ್ಪನ್‌ಪೇಟೆ : ರೈತರು ಮತ್ತು ಕೃಷಿ ಪದವೀಧರರು ಈ ದೇಶದ ಬೆನ್ನೆಲುಬು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಸಹ್ಯಾದ್ರಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲಿನಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಲೆನಾಡಿನಲ್ಲಿ ಬೇಸಾಯ ಕ್ರಮಗಳು ಬದಲಾಗಬೇಕು. ಬೆಳೆಗಳಲ್ಲಿ ಅನುಸರಿಸುತ್ತಿರುವ ಅವೈಜ್ಞಾನಿಕ ಬೇಸಾಯ ಕ್ರಮಗಳಿಂದ ರೋಗ ಮತ್ತು ಕೀಟಗಳ ಬಾಧೆ ಹೆಚ್ಚುತ್ತಿದ್ದು, ಇಳುವರಿ ಕುಂಠಿತಗೊಳ್ಳುತ್ತದೆ. ಆದುದರಿಂದ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ರೈತರು ಸಮೃದ್ಧಿಯಾಗಬೇಕಿದೆ. ಹಳ್ಳಿಗಳಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇರುವ ಭೂಮಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬೆಳೆದು ಲಭ್ಯವಿರುವ ಸಂಪನ್ಮೂಲಗಳನ್ನು ಹಾಗೂ ಭೂಮಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ರೈತರು ಪ್ರಗತಿಶೀಲರಾಗಬೇಕಿದೆ ಎಂದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಇರುವಕ್ಕಿ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಗಣಪತಿ, ರಸಗೊಬ್ಬರಗಳ ಹೇರಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತಗೊಳ್ಳುತಿದ್ದು, ಸಾವಯವ ಗೊಬ್ಬರವನ್ನು ಬಳಸಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಕಾಪಾಡುವುದು ಅಗತ್ಯವಾಗಿದೆ ಎಂದರು‌.

ಕೃಷಿಯಲ್ಲಿನ ಸಮಸ್ಯೆಗಳಾದ ಮಣ್ಣಿನ ಸಮಸ್ಯೆ, ರೋಗ ಮತ್ತು ಕೀಟಗಳ ಬಾಧೆ, ಪೋಷಕಾಂಶಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಪರಿಶೋಧಸಿ, ಪರಿಹಾರೋಪಾಯಗಳನ್ನು ಒಂದೆಡೆ ರೈತರಿಗೆ ದೊರೆಯುವಂತೆ ಮಾಡುವುದು ಮಾಹಿತಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ‌.

ಅಡಿಕೆಯ ಮುಖ್ಯ ರೋಗಗಳಾದ ಎಲೆಚುಕ್ಕಿ ರೋಗ, ಕೊಳೆ ರೋಗ, ಅಣಬೆ ರೋಗಗಳ ಲಕ್ಷಣಗಳನ್ನು ರೋಗ ಬಂದಿರುವ ಗಿಡದ ಭಾಗಗಳನ್ನು ಗೋಡೆಗೆ ಅಂಟಿಸಿ ತೋರಿಸುವುದರ ಜೊತೆಗೆ ನಿರ್ವಹಣೆಯ ಮಾಹಿತಿಯನ್ನು ಬರೆಯಲಾಗಿತ್ತು. ಅಡಿಕೆಯಲ್ಲಿ ಇರುವ ಬೇರುಹುಳು, ಸುಳಿ ತಿಗಣೆ ಹುಳುವಿನಿಂದ ಅಡಿಕೆಯಲ್ಲಿ ಕಾಣುವ ಲಕ್ಷಣಗಳು ಹಾಗೂ ನಿರ್ವಹಣೆಯ ಬಗ್ಗೆ ತಿಳಿಸಲಾಗಿತ್ತು. ಬೇರುಹುಳುವಿನ ಜೀವನಚಕ್ರ ಗೋಡೆಯ ಮೇಲೆ ಚಿತ್ರಿಸಿರುವುದು ಗಮನಾರ್ಹವಾಗಿತ್ತು.

ಇದೇ ರೀತಿಯಲ್ಲಿ ಭತ್ತ , ಕಾಳುಮೆಣಸಿನಲ್ಲಿ ಕಂಡುಬರುವ ರೋಗ ಹಾಗೂ ಕೀಟಭಾದೆಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣೆಯ ಮಾಹಿತಿಯನ್ನು ಬಿಂಬಿಸಲಾಗಿತ್ತು.

ರೋಗ, ಕೀಟಬಾಧೆಯ ಕುರಿತು ಕೃಷಿ ವಿವಿಯು ಬಿಡುಗಡೆ ಮಾಡುವ ಭಿತ್ತಿಪತ್ರಗಳನ್ನು ಇಡುವುದರ ಜೊತೆಗೆ ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಬಳಸುವ ಸೂಕ್ತ ರಾಸಾಯನಿಕಗಳನ್ನು ಹಾಗೂ ಜೈವಿಕ ನಿಯಂತ್ರಕಗಳನ್ನು ಇಡಲಾಗಿತ್ತು.

ಹೈನುಗಾರಿಕೆಯ ನಕಾಶೆಯನ್ನು ರಸಮೇವು ತಯಾರಿಕೆಯ ವಿಧಾನ, ಹಸು ಹಾಗೂ ಎಮ್ಮೆಯ ವಿವಿಧ ತಳಿಗಳು ಹಾಗೂ ಅವುಗಳಲ್ಲಿ ಕಂಡುಬರುವ ರೋಗಗಳು, ಲಸಿಕೆ ಹಾಗೂ ಸ್ವಚ್ಛ ಹಾಲಿನ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಲಾಯಿತು.

ಮುಖ್ಯ ಬೆಳೆಗಳಾದ ಅಡಿಕೆ, ಭತ್ತ ಹಾಗೂ ಕಾಳುಮೆಣಸಿನ ಬೇಸಾಯ ಕ್ರಮಗಳು, ಮಣ್ಣಿನ ಪದರು ತೋರಿಸುವ ಮಾದರಿ, ಕೊಳವೆಬಾವಿ ಮರುಪೂರಣ, ಮರಗಳ ಮಹತ್ವ, ಯಾಂತ್ರೀಕರಣದ ವಿಸ್ತಾರ, ಜೈವಿಕ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ, ಬೀಜದ ವರ್ಗಗಳು, ತುಡುವೆ ಜೇನಿ ಮಹತ್ವ ಹಾಗೂ ಜೇನು ಸಾಕಾಣಿಕೆ ಮಾಡುವ ವಿಧಾನ, ಅಣಬೆ ಕೃಷಿ, ಮಣ್ಣಿನ ಮಾದರಿ ತೆಗೆಯುವ ವಿಧಾನ, ಹಸಿರೆಲೆ ಗೊಬ್ಬರಗಳು, ಶೂನ್ಯ ಶಕ್ತಿ ತಂಪಾದ ಕೋಣೆ (ZECC), ಸೌರ ಶಕ್ತಿ ನೀರಾವರಿ ಪದ್ಧತಿ, ಜೈವಿಕ ಅನಿಲ ಘಟಕದ ಮಾದರಿಗಳ ಕುರಿತು ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಚಿತ್ರಿಸಲಾಗಿತ್ತು. ಕೈತೋಟ, ಅಜೋಲ ಕೃಷಿ, ಅಡಿಕೆ ಸಿಪ್ಪೆ ಮತ್ತು ಎರೆಹುಳು ಗೊಬ್ಬರಗಳ ಕುರಿತು ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಚಂದ್ರಮೌಳಿ, ಕೋಡೂರಿನ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕಲಗೋಡು ಹಾಗೂ ಸದಸ್ಯರಾದ ಮಂಜಪ್ಪ ಮತ್ತು ಶ್ಯಾಮಲಾ, ಸ.ಹಿ.ಪ್ರಾ.ಶಾಲೆ ಯಳಗಲ್ಲಿನ ಮುಖ್ಯ ಶಿಕ್ಷಕ ಪರಮೇಶ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಕೃಷಿ ಸಕಿಯರು, ಕೃ.ವಿ.ಮ. ಇರುವಕ್ಕಿಯ ಡಾ. ಜ್ಯೋತಿ ರಾಥೋಡ್ , ಡಾ.ಗಣಪತಿ , ಡಾ.ಶೃತಿ, ಡಾ. ಕಿರಣ್ ಕುಮಾರ್ ಮತ್ತು ಡಾ.ಶಶಿಕಲಾ ಉಪಸ್ಥಿತರಿದ್ದರು ಹಾಗೂ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!