ಹೊಸನಗರವನ್ನು ಮಾದರಿಯನ್ನಾಗಿ ಮಾಡಲು ಸರ್ವರೂ ಕೈಜೋಡಿಸಬೇಕು ; ಸಚಿವ ಮಧು ಬಂಗಾರಪ್ಪ
ಹೊಸನಗರ : ಪಟ್ಟಣದ ಅಭಿವೃದ್ಧಿಗೆ ಅಗತ್ಯ ಅನುದಾನಕ್ಕಾಗಿ ಶ್ರಮಿಸುತ್ತೇನೆ. ಹೊಸನಗರವನ್ನು ಮಾದರಿಯನ್ನಾಗಿ ಮಾಡಲು ಸರ್ವರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೊಸನಗರಕ್ಕೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ನೂತನ ಸರ್ಕಾರದ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ತಂದೆಯವರ ಆದರ್ಶ ಹಾಗೂ ಅವರು ಸೂಚಿಸಿದ ದಾರಿಯಲ್ಲಿ ಜನಸೇವೆ ಮಾಡುತ್ತಿದ್ದೇನೆ. ಶಿಕ್ಷಣ ಖಾತೆ ಅತ್ಯಂತ ಮಹತ್ವದ್ದು ಹಾಗೂ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಾದದ್ದು. ಜನರ ನಿರೀಕ್ಷೆ ಹುಸಿಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಹೊಸನಗರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ. ಇಲ್ಲಿನ ಹಲವು ಕಛೇರಿಗಳಿಗೆ ನೂತನಕಟ್ಟಡ ನನ್ನ ಅವಧಿಯಲ್ಲಿಯೇ ಆಗಿತ್ತು. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿವ ನೀರಿನ ಶಾಶ್ವತ ಪರಿಹಾರ ರೂಪಿಸುವುದು ಮೊದಲ ಆದ್ಯತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಎಲ್ಲ ಸಿಬ್ಬಂದಿಗಳು ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಗುರುರಾಜ್, ಸಿಂಥಿಯಾ ಸೆರಾವೋ ಮಾತನಾಡಿದರು.
ಸದಸ್ಯರಾದ ಗುಲಾಬಿ ಮರಿಯಪ್ಪ, ಶಾಹೀನಾ ನಾಸೀರ್, ನಾಗಪ್ಪ, ಗಾಯತ್ರಿ ನಾಗರಾಜ್, ಚಂದ್ರಕಲಾ ನಾಗರಾಜ್, ಕೃಷ್ಣವೇಣಿ, ತಹಸೀಲ್ದಾರ್ ಧರ್ಮೇಂದ್ರ ಕೋರಿ ಮತ್ತಿತರರು ಹಾಜರಿದ್ದರು.