ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು
ರಿಪ್ಪನ್ಪೇಟೆ : ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ತಿಕೆರೆ ನಿವಾಸಿ ನದೀಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗರ್ತಿಕೆರೆಯಲ್ಲಿ ಏಪ್ರಿಲ್ 2 ರಂದು ಪಾದಚಾರಿಗೆ ಬೈಕ್ ಡಿಕ್ಕಿಯಾಗಿತ್ತು. ಈ ವೇಳೆ ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರಿಗೂ ಗಂಭೀರವಾದ ಗಾಯವಾಗಿತ್ತು. ಇಬ್ಬರನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಮೆಗ್ಗಾನ್ನಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಒಯ್ಯುತಿದ್ದಾಗ ಪಾದಚಾರಿ ಚಿನ್ನಪ್ಪ ಮೃತಪಟ್ಟಿದ್ದರು.
ಇನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ನದೀಮ್ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗರ್ತಿಕೆರೆ ನಿವಾಸಿ ನದೀಮ್ (22) ಬೈಕ್ನಲ್ಲಿ ಗರ್ತಿಕೆರೆ ಕಡೆಯಿಂದ ಮನೆಗೆ ತೆರಳುವಾಗ ಸರ್ಕಾರಿ ಪ್ರೌಢಶಾಲೆ ಬಳಿ ನಡೆದುಕೊಂಡು ಹೋಗುತಿದ್ದ ಚಿನ್ನಪ್ಪ (54) ಎಂಬುವವರಿಗೆ ಬೈಕ್ನಿಂದ ಗುದ್ದಿದ್ದರು. ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ನಂತರ ಬೈಕ್ ಪ್ರೌಢಶಾಲಾ ಮುಂದಿದ್ದ ನಾಮಫಲಕಕ್ಕೆ ಜೋರಾಗಿ ಡಿಕ್ಕಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಮಫಲಕ ಪುಡಿಪುಡಿಯಾಗಿತ್ತು. ಹಾಗೇ ನದೀಮ್ ಗಂಭೀರವಾಗಿ ಗಾಯಗೊಂಡಿದ್ದರು.