ಹುಂಚ ಹೋಬಳಿಯ 9 ಗ್ರಾ.ಪಂ. ಕಾಂಗ್ರೆಸ್ ತೆಕ್ಕೆಗೆ ; ಅಭಿನಂದನೆ
ರಿಪ್ಪನ್ಪೇಟೆ: ಇತ್ತೀಚೆಗೆ ಸರ್ಕಾರದ ಗ್ರಾಮೀಣಾಭಿವೃದ್ದಿ ಪಂಚಾಯ್ತಿ ಇಲಾಖೆಯವರು ರಾಜ್ಯದ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷರ 30 ತಿಂಗಳ ಮೀಸಲಾತಿಯನ್ವಯ ಅಧಿಕಾರ ಹಂಚಿಕೆಯಂತೆ ಎರಡನೇ ಅವಧಿಗೆ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ವ್ಯಾಪ್ತಿಯ 10 ಗ್ರಾಮ ಪಂಚಾಯ್ತಿಯಲ್ಲಿ 8 ಗ್ರಾಮ ಪಂಚಾಯ್ತಿಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿದೆ ಎಂದು ಹುಂಚ ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಸುಣ್ಣಕಲ್ಲು ಗುರುರಾಜ್ ತಿಳಿಸಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿ ಭರವಸೆಯನ್ವಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಹೆಚ್ಚು ಮತದಾರರು ಬೆಂಬಲ ವ್ಯಕ್ತಪಡಿಸಿ ಬರುತ್ತಿದ್ದಾರೆಂಬುದಕ್ಕೆ ಎರಡನೇ ಅವಧಿಗೆ ಮೀಸಲಾತಿಯನ್ವಯ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಹಂಚಿಕೆಯಲ್ಲಿ ತಾಲ್ಲೂಕಿನ ಹುಂಚ ಹೋಬಳಿಯ ವ್ಯಾಪ್ತಿ ಕೋಡೂರು, ಮುಂಬಾರು, ತ್ರಿಣಿವೆ, ಚಿಕ್ಕಜೇನಿ, ಹೆದ್ದಾರಿಪುರ, ಹುಂಚ, ಮೇಲಿನಬೆಸಿಗೆ, ಸೊನಲೆ ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ ಇವರ ಆಯ್ಕೆಗೆ ಶ್ರಮಿಸಿದ ಕ್ಷೇತ್ರದ ಮಾಜಿ ಶಾಸಕ ಪಕ್ಷದ ಮುಖಂಡರಾದ ಕಿಮ್ಮನೆ ರತ್ನಾಕರ್, ಜಿ.ಪಂ. ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಬಿ.ಜಿ.ನಾಗರಾಜ್, ತಾ.ಪಂ ಮಾಜಿ ಸದಸ್ಯರಾದ ಬಿ.ಜೆ.ಚಂದ್ರಮೌಳಿಗೌಡ, ಎರಗಿ ಉಮೇಶ್ ಮತ್ತು ಮುಂಜುನಾಥಗೌಡ ಇವರನ್ನು ಹುಂಚ ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಣ್ಣಕಲ್ಲು ಗುರುರಾಜ ಅಭಿನಂದಿಸಿದ್ದಾರೆ.
ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ
ರಿಪ್ಪನ್ಪೇಟೆ: ಇದೇ ಆಗಸ್ಟ್ 21 ರಂದು ನಾಗರ ಪಂಚಮಿ ಹಬ್ಬದ ಆಂಗವಾಗಿ ರಿಪ್ಪನ್ಪೇಟೆಯ ಸಾಗರ ರಸ್ತೆಯಲ್ಲಿನ ತಿಲಕ ನಗರದ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 21 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೆ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರಿಗೆ ಪವಮಾನ ಆಭಿಷೇಕ, ಕ್ಷೀರಾಭೀಷೇಕ, ಎಳನೀರು ಅಭಿಷೇಕ, ಕುಂಕುಮಾರ್ಚನೆ ಸೇವೆಯೊಂದಿಗೆ ವಿಶೇಷ ಅಲಂಕಾರ ಪೂಜಾ ಕೈಂಕರ್ಯಗಳು ಜರುಗಲಿದ್ದು ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಪ್ಪನ್ಪೇಟೆ ರಕ್ತದಾನ ಶಿಬಿರ
ರಿಪ್ಪನ್ಪೇಟೆ: ಇಲ್ಲಿನ ರೋಟರಿ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗ್ರಾಮ ಪಂಚಾಯ್ತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಆಗಸ್ಟ್ 15 ರಂದು ಮಂಗಳವಾರ ಬೆಳಗ್ಗೆ ಸ್ವಾತಂತ್ರ್ಯೋತ್ಸವ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು’’ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ದೇವದಾಸ್ ಅಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.