ಟ್ರ್ಯಾಕ್ಟರ್ನಲ್ಲಿ ಭತ್ತದ ಹೊರೆ ಸಾಗಿಸುವಾಗ ವಿದ್ಯುತ್ ಸ್ಪರ್ಶ ; 150 ಹೊರೆ ಭತ್ತದ ಪೈರು ಸುಟ್ಟು ಭಸ್ಮ
ತೀರ್ಥಹಳ್ಳಿ : ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಳ್ಳಿ ಗ್ರಾಮದ ಈಶ್ವರನಾಯ್ಕ ಎಂಬುವವರ ಸುಮಾರು 150 ಹೊರೆ ಭತ್ತದ ಪೈರು ವಿದ್ಯುತ್ ತಂತಿ ತಗುಲಿ ಸುಟ್ಟು ಭಸ್ಮವಾದ ಘಟನೆ ಬುಧವಾರ ನಡೆದಿದೆ.
ತಮ್ಮ ಗದ್ದೆಯಿಂದ ಮನೆಗೆ ಟ್ರ್ಯಾಕ್ಟರ್ ಮೂಲಕ ಭತ್ತದ ಪೈರನ್ನು ಹೊರೆ ಕಟ್ಟಿ ತರುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಉಂಟಾಗಿದೆ ಇದನ್ನರಿತ ಚಾಲಕ ಸ್ವಲ್ಪ ದೂರದಲ್ಲಿ ಭತ್ತದ ಹೊರೆಗಳನ್ನು ಕೆಳಗೆ ಉರುಳಿಸಿದ್ದಾನೆ. ಇದರಿಂದ ಆಗಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ. ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಬೆಳೆ ಕೈ ಸೇರದಿರುವುದು ರೈತನಲ್ಲಿ ಬೇಸರ ಉಂಟು ಮಾಡಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಶಿವಾನಂದ, ಕಟ್ಟೆ ಮಹೇಶ್ ಭೇಟಿ ನೀಡಿದ್ದರು.