ಪಂಪ್ ಸ್ಟೋರೇಜ್ ಪ್ಲಾಂಟ್ಸ್’ಗಳ ನಿರ್ಮಾಣಕ್ಕೆ 8500 ಕೋಟಿ ರೂ.ಗಳ ಯೋಜನೆ : ಸಚಿವ ಕೆ.ಜೆ.ಜಾರ್ಜ್

0 397

ಶಿವಮೊಗ್ಗ : ರಾಜ್ಯದಲ್ಲಿ ಕೆ.ಪಿ.ಸಿ.ಎಲ್ ವತಿಯಿಂದ ಪಂಪ್ ಸ್ಟೋರೇಜ್ ಪ್ಲಾಂಟ್ಸ್ ಗಳ ನಿರ್ಮಾಣಕ್ಕೆ ಸುಮಾರು 8500 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು.

ಅವರು ಶನಿವಾರ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಮೆಸ್ಕಾಂ ವ್ಯಾಪ್ತಿಯೊಳಗಿನ ವಿದ್ಯುತ್ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕುಸುಮ್ ಯೋಜನೆಯಡಿ ರಾಜ್ಯದಲ್ಲಿ 750 ಹೊಸ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಖಾಸಗಿಯವರೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಶಿವಮೊಗ್ಗ ಸಮೀಪದ 220 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ 100 ಎಂ.ವಿ.ಎ. ಅಧಿಕಶಕ್ತಿ ಪರಿವರ್ತಕ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಶಿವಮೊಗ್ಗ ನಗರದ ಹೊರವಲಯದಲ್ಲಿರುವ ದೇವಕಾತಿಕೊಪ್ಪ ಮತ್ತು ಸಿದ್ಲೀಪುರ ಕೈಗಾರಿಕಾ ಪ್ರದೇಶಕ್ಕೆ ಹೊಸದಾಗಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಕ್ರಮವಹಿಸಲಾಗುವುದು ಎಂದರು.

ರೈತರು ತಮ್ಮ ಹೊಲಗಳಲ್ಲಿನ ಬೆಳೆಗಳಿಗೆ ಕೊಳವೆಬಾವಿಗಳಿಂದ ನೀರನ್ನು ಪಡೆದುಕೊಳ್ಳಲು ಅವಶ್ಯವಿರುವ ವಿದ್ಯುತ್‍ಗಾಗಿ ಸೋಲಾರ್ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವವರಿಗಾಗಿ ಶೇ.80ರಷ್ಟು ಸಹಾಯಧನವನ್ನು ಸರ್ಕಾರದಿಂದ ನೀಡಲಾಗುವುದು. ಈ ವಿದ್ಯುತ್‍ನಿಂದ ಸುಮಾರು 10 ಹೆಚ್.ಪಿ.ವರೆಗಿನ ಮೋಟಾರ್ ಯಂತ್ರಗಳನ್ನು ನಡೆಸಬಹುದಾಗಿದೆ ಎಂದ ಅವರು, ಹೊಳಲೂರು ಮತ್ತು ಬೆಜ್ಜವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 220ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪ್ರಸ್ತುತ ಬಳಸುತ್ತಿರುವ ವಿದ್ಯುತ್‍ನ ಬಿಲ್ ಕೋಟ್ಯಂತರ ರೂ.ಗಳ ಬಾಕಿ ಇದ್ದು, ಪಂಚಾಯಿತಿಗಳಿಂದ ಬಾಕಿ ಪಾವತಿಸುವುದು ಸಾಧ್ಯವಾಗುತ್ತಿಲ್ಲ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಪ್ರಸ್ತಾಪಿತ ವಿಷಯಕ್ಕೆ ಸಂಬಂಧಿಸಿದಂತೆ, ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಈ ವಿಷಯವನ್ನು ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದರು.

ದೇಶದ ಬೇರೆ-ಬೇರೆ ರಾಜ್ಯಗಳಿಂದ ವಿದ್ಯುತ್‍ನ್ನು ಖರೀದಿಸಿ ರಾಜ್ಯದ ಜನರ ಅನುಕೂಲಕ್ಕೆ ತಕ್ಕಂತೆ ಸರಬರಾಜು ಮಾಡಲಾಗುತ್ತಿದೆ. ಪ್ರಸಕ್ತ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕುಂಟಿತಗೊಂಡಿದೆ. ಇರುವ ವಿದ್ಯುತ್‍ನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದ ವಿದ್ಯುತ್‍ನ್ನು 7ಗಂಟೆಗಳಿಂದ 5 ಗಂಟೆಗೆ ಮಿತಿಗೊಳಿಸಲಾಗಿದೆ. ಅಂತೆಯೇ ಬೇಸಿಗೆ ಕಾಲವಾದ್ದರಿಂದ 9000 ಮೆ.ವ್ಯಾ. ನಿಂದ 16 ಮೆ.ವ್ಯಾ. ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳಿಂದ ವಿದ್ಯುತ್ ಆಮದು ಮಾಡಿಕೊಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರವೂ ಕೂಡ ವಿದ್ಯುತ್ ಸರಬರಾಜು ಮಾಡಲು ಸಹಕಾರ ನೀಡಲಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿದೆ. ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿನ ಕೃಷಿ ಚಟುವಟಿಕೆಗಳಿಗೂ ವ್ಯವಸ್ಥಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಭಾವ್ಯ ವಿದ್ಯುತ್ ಅಭಾವವನ್ನು ನೀಗಿಸಲು ತೆರೆದ ಮಾರುಕಟ್ಟೆಯಲ್ಲಿ ವಿದ್ಯುತ್‍ನ್ನು ಖರೀದಿಸಲು ಕ್ರಮ ವಹಿಸಲಾಗುವುದು ಎಂದರು.

ರೈತರ ಪಂಪ್‍ಸೆಟ್‍ಗಳಿಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ಅಕ್ರಮ ವಿದ್ಯುತ್ ಬಳಕೆಯನ್ನು ಸಕ್ರಮಗೊಳಿಸುವ, ಹಾಗೂ ಅಕ್ರಮವನ್ನು ನಿಯಂತ್ರಿಸುವ ಸಲುವಾಗಿ ವಿಶೇಷವಾಗಿ ಗಮನಹರಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಟ್ರಾನ್ಸ್‌ಫಾರ್ಮರ್ಗಳ ಬದಲಾವಣೆ, ದುರಸ್ತಿಗೆ ಕ್ರಮ ವಹಿಸಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜುಗೊಳಿಸುವ ಖಾಸಗಿ ವ್ಯಕ್ತಿ/ಸಂಸ್ಥೆಗಳೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಸೋಲಾರ್ ಮತ್ತು ವಿಂಡ್‍ಪವರ್ ವಿದ್ಯುತ್ ಘಟಕಗಳ ಆರಂಭಿಸುವವರಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಶರಾವತಿ, ವರಾಹಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ ಎಂದ ಅವರು, ಪರಿಸರ ಸ್ನೇಹಿ ಗ್ರೀನ್ ಹೈಡ್ರೋಜನ್ ಪವರ್ ಉತ್ಪಾದಿಸುತ್ತಿರುವ ಉತ್ತರ ಕರ್ನಾಟಕದ ಆಯ್ದ ಜಿಲ್ಲೆಗಳ ವಿದ್ಯುತ್‍ನ್ನು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಪಾವಗಡದಲ್ಲಿ ಅಲ್ಲಿನ ರೈತರ ಸಹಕಾರದೊಂದಿಗೆ ಸುಮಾರು 10,000 ಎಕರೆ ಭೂಪ್ರದೇಶದಲ್ಲಿ ಸೋಲಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಅಲ್ಲಿನ ರೈತರು ಇನ್ನೂ 10,000ಎಕರೆ ಭೂಮಿ ಒದಗಿಸಲು ಉತ್ಸಾಹ ತೋರುತ್ತಿದ್ದಾರೆ. ಎಂದರು.

ಸ್ಥಳೀಯವಾಗಿರುವ ವಿದ್ಯುತ್ ಸಂಬಂಧಿ ಸಮಸ್ಯೆಗಳ ಇತ್ಯರ್ಥಕ್ಕೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೊಣೆಗಾರಿಕೆ ನೀಡಲಾಗಿದೆ. ಖಾಸಗಿ ಬೋರ್‍ವೆಲ್‍ಗಳಿಂದ ಗ್ರಾಮೀಣ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಬಳಸುವ ವಿದ್ಯುತ್‍ಗೆ ಯಾವುದೇ ನಿರ್ಬಂಧ ವಿಧಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇತ್ತೀಚಿನ ಕ್ಯಾಬಿನೆಟ್ ನಿರ್ಣಯದಿಂದಾಗಿ ರಾಜ್ಯದ ಸುಮಾರು 70ಲಕ್ಷ ಕುಟುಂಬಗಳಿಗೆ 10 ಯೂನಿಟ್ ವಿದ್ಯುತ್ ಹೆಚ್ಚುವರಿಯಾಗಿ ದೊರೆಯಲಿದೆ ಎಂದರು.

ವಿದ್ಯುತ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 10,000ಸಿಬ್ಬಂಧಿಗಳಿಗೆ ತರಬೇತಿ, ಯಂತ್ರೋಪಕರಣಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಆಕಸ್ಮಿಕ ಅವಘಡಗಳಿಗೆ ಸೂಕ್ತ ಪರಿಹಾರ ಒದಗಿಸಲು ನಿಧಿ ಸ್ಥಾಪಿಸಿ, ಸಂತ್ರಸ್ಥ ಕುಟುಂಬಗಳಿಗೆ ಉತ್ತಮ ಮೊತ್ತವನ್ನು ನೀಡಲು ಉದ್ದೇಶಿಸಲಾಗಿದೆ. ಘಟಕಗಳನ್ನು ಸಿಬ್ಬಂಧಿ ರಹಿತವಾಗಿ ನಿರ್ವಹಿಸಲು ಉದ್ದೇಶಿಸಿದೆ. ಸಿಬ್ಬಂಧಿಗೆ ವೇತನ, ಭತ್ಯೆ. ಸಮವಸ್ತ್ರ ಪೂರೈಕೆ ಮಾಡಲಾಗುತ್ತಿದೆ. ನಗರದ ಪ್ರದೇಶದ ವ್ಯಾಪ್ತಿಯಲ್ಲಿ ಹಾದುಹೋಗುವ ಹೈಟೆನ್ಶನ್ ಕೇಬಲ್‍ನ ಕೆಳಭಾಗದಲ್ಲಿನ ವಿಶಾಲವಾದ ಖಾಲಿ ಜಾಗದಲ್ಲಿ ಹೈಡ್ರೋಪವರ್ ಘಟಕಗಳ ಅಳವಡಿಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಮೆಸ್ಕಾಂ ಅಭಿಯಂತರರಿಗೆ ಅವರು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕ.ವಿ.ಪ್ರ.ನಿ.ನಿ.ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಮೆಸ್ಕಾಂ ವ್ಯವಸ್ಥಾಪಕಿ ಪದ್ಮಾವತಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಶಾಸಕಿ ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!