ಪರೀಕ್ಷಾ ಕೇಂದ್ರಕ್ಕೆ ಪಿಕ್ಅಪ್ ವಾಹನ ಏರಿ ಬಂದ ಸರ್ಕಾರಿ ಶಾಲೆಯ SSLC ವಿದ್ಯಾರ್ಥಿಗಳು !
ರಿಪ್ಪನ್ಪೇಟೆ: ಇಂದಿನಿಂದ ರಾಜ್ಯವ್ಯಾಪ್ತಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪಬ್ಲಿಕ್ ಪರೀಕ್ಷೆ ಆರಂಭಗೊಂಡಿದ್ದು ಪರೀಕ್ಷಾ ಕೇಂದ್ರಕ್ಕೆ ಪಿಕ್ಅಪ್ ವಾಹನದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಬಂದಿದ್ದು ಸಾರ್ವಜನಿಕರ ಮತ್ತು ಪೋಷಕರ ಅಸಮದಾನಕ್ಕೆ ಕಾರಣವಾಗಿದೆ.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು ಈ ಪರೀಕ್ಷಾ ಕೇಂದ್ರದ ವ್ಯಾಪ್ತಿಗೆ ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಗಳು ಒಳಪಡುತ್ತಿದ್ದು ಖಾಸಗಿಯಾಗಿ ಶ್ರೀಬಸವೇಶ್ವರ, ಶಾರದಾ, ರಾಮಕೃಷ್ಣ ಮೇರಿಮಾತಾ, ಮಲೆನಾಡು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರಬೇಕಾಗಿದ್ದು ಸರ್ಕಾರ ವಿಶೇಷವಾಗಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪಬ್ಲಿಕ್ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ವ್ಯವಸ್ಥೆಯೊಂದಿಗೆ ಉಚಿತ ಬಸ್ ಸಂಚಾರ ಕಲ್ಪಿಸಲಾಗಿದ್ದರೂ ಕೂಡಾ ಹಿಂದುಳಿದ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯದಿಂದ ವಂಚಿತಗೊಳಿಸಿದೆ ಎಂಬುದಕ್ಕೆ ಇಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಪಿಕ್ಅಪ್ ವಾಹನದಲ್ಲಿ ಬಂದಿರುವುದೇ ಸಾಕ್ಷಿಯಾಗಿದೆ.
ಪಿಕ್ಅಪ್ ವಾಹನದಲ್ಲಿ ಸುಮಾರು 25-30 ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿದ್ದನ್ನು ಕಂಡ ತಕ್ಷಣ ಮಾಧ್ಯಮದವರು ಇಲ್ಲಿನ ವಿನಾಯಕ ವೃತ್ತದಲ್ಲಿ ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲ ಅಪ್ಲೋಡ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ.
ಸರಕು ಸಾಗಾಣಿಕೆಯ ವಾಹನದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಬಂದಿರುವುದನ್ನು ಕಂಡು ಆಕಸ್ಮಿಕವಾಗಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಚಿಂತೆ ಪೋಷಕರಲ್ಲಿ ಕಾಡುವಂತಾಗಿದೆ.