ಭೌತಿಕ ಬೆಳವಣಿಗೆಯ ಜೊತೆಗೆ ಬೌದ್ಧಿಕ ಬೆಳವಣಿಗೆ ಅಗತ್ಯ ; ಡಾ.ಕೆ.ವಿ.ಪತಂಜಲಿ

0 539

ಹೊಸನಗರ : ಪಂಚ ಆಲಯಗಳಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಆಯುರ್ವೇದ ವೈದ್ಯ ಡಾ.ಕೆ.ವಿ.ಪತಂಜಲಿ ಹೇಳಿದರು.

ಅವರು ತಾಲೂಕಿನ ಪುರಪ್ಪೆಮನೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳ ಒಕ್ಕೂಟ 14 ಲಕ್ಷ ರೂ. ಕೊಡುಗೆಯಲ್ಲಿ ನಿರ್ಮಿಸಿದ ನೂತನ ಅನ್ನಪೂರ್ಣ ಭೋಜನಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮಕ್ಕೂ ವಾಚನಾಲಯ, ಚಿಕಿತ್ಸಾಲಯ, ಭೋಜನಾಲಯ, ಶೌಚಾಲಯ ಹಾಗೂ ವಿದ್ಯಾಲಯಗಳು ಇದ್ದಲ್ಲಿ, ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಮಕ್ಕಳು ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳುವುದರಿಂದ ಶೈಕ್ಷಣಿಕ ಪ್ರಗತಿ ಕಂಡುಕೊಳ್ಳಲು ಸಾಧ್ಯವಿದೆ. ಭೌತಿಕ ಬೆಳವಣಿಗೆಯ ಜೊತೆಗೆ ಬೌದ್ಧಿಕ ಬೆಳವಣಿಗೆ ಅಗತ್ಯ ಎಂದರು.

2000ನೇ ಇಸವಿ ಬಳಿಕ ದೇಶದಲ್ಲಿ ಜಾರಿಗೊಂಡ ಸರ್ವಶಿಕ್ಷಣ ಅಭಿಯಾನದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ. ಶಿಕ್ಷಣ ತಜ್ಞರು ಜಾರಿಗೊಳಿಸಿರುವ ಶಿಕ್ಷಣ ನೀತಿಯ ಲೋಪಗಳಿಂದ ಇಂದು ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಫಲವಾಗಿ ಔದ್ಯೋಗಿಕ ರಂಗದಲ್ಲಿ ಯಶಸ್ಸು ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪುರಪ್ಪೆಮನೆಯ ಸರ್ಕಾರಿ ಶಾಲೆ ಹಲವು ವರ್ಷಗಳಿಂದ ನಿರಂತರವಾಗಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳ್ಳಲು ಪೂರಕ ವಾತಾವರಣ ಕಲ್ಪಿಸಿದೆ. ಇದರ ಫಲವಾಗಿ ಶೈಕ್ಷಣಿಕ ಸಾಧನೆಯ ಪಟ್ಟಿಯಲ್ಲಿ ಇಂದು ಜಿಲ್ಲೆಯಲ್ಲಿಯೇ ಎರಡನೇ ಸ್ಥಾನ ಪಡೆದಿರುವು ಶ್ಲಾಘನೀಯ ಎಂದರು.

ಬರುವ ಬೇಸಿಗೆ ರಜೆಯಲ್ಲಿ ಪ್ರತಿದಿನ ದಿನಪತ್ರಿಕೆ ಹಾಗೂ ಕನಿಷ್ಠ 20 ಪುಸ್ತಕ ಓದುವ ಪ್ರತಿ ವಿದ್ಯಾರ್ಥಿಗೆ ತಲಾ 1 ಸಾವಿರ ರೂ. ಧನಸಹಾಯ ನೀಡುವ ಭರವಸೆ ನೀಡಿದರು.

ಹಳೆ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯದರ್ಶಿ ಮೃತ್ಯುಂಜಯ ಮಾತನಾಡಿ, ಪ್ರತಿ ಸರ್ಕಾರಿ ಶಾಲೆಗಳಲ್ಲಿ ಇಂತಹ ಕರ‍್ಯಕ್ರಮಗಳು ಆಗಬೇಕು. ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕೈಗೊಳ್ಳುವಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಪೋಷಕರೇ ಇಲ್ಲಿ ಭೋಜನಾಲಯ ನಿರ್ಮಿಸಿರುವುದು ಗಮನಾರ್ಹವಾಗಿದೆ ಎಂದರು.

ಬಿಇಒ ಎಚ್.ಆರ್.ಕೃಷ್ಣಮೂರ್ತಿ ಮಾತನಾಡಿ, ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಮೊದಲು ಮಾದರಿಯಾಗಬೇಕು ಎಂದರು.

ಶಾಲಾಸಮಿತಿ ಅಧ್ಯಕ್ಷ ಎಂ.ಅಶೋಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ದಿನೇಶ್, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಅನ್ನಪೂರ್ಣಮ್ಮ, ರಾಘವೇಂದ್ರ, ಮಹಾಲಕ್ಷ್ಮಿ, ಸಂತೋಷ, ಜಯಲಕ್ಷ್ಮಿ, ಜಯಪ್ರಕಾಶ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ, ಭೂದಾನಿ ಶಂಕರನಾರಾಯಣ ಹೆಗಡೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ ಎಸ್.ಪಿ, ಶಿಕ್ಷಕರ ಸಂಘದ ಅಧ್ಯಕ್ಷ ಕುಬೆಂದ್ರಪ್ಪ, ಉಪಾಧ್ಯಕ್ಷ ಮಹಮದ್ ಅಲ್ತಾಫ್, ಸಿಆರ್‌ಪಿ, ಅರವಿಂದ ಮತ್ತಿತರರು ಉಪಸ್ಥಿತರಿದ್ದರು. ಪ್ರಸನ್ನಕುಮಾರ್ ನಿರೂಪಿಸಿದರು.

Leave A Reply

Your email address will not be published.

error: Content is protected !!