Shivamogga | ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೆ ಬ್ಯಾಂಕ್‍ಗಳು ಸಹಕರಿಸಬೇಕು : ಬಿ.ವೈ.ರಾಘವೇಂದ್ರ

0 80

ಶಿವಮೊಗ್ಗ : ಕೇಂದ್ರ ಪುರಸ್ಕೃತ ಯೋಜನೆಗಳು/ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಹಾಗೂ ಬ್ಯಾಂಕುಗಳು ಇದಕ್ಕೆ ಸಹಕರಿಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬ್ಯಾಂಕರ್ಸ್ ಡಿಸಿಸಿ ಮತ್ತು ಡಿಎಲ್‍ಆರ್‍ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪಿಎಂ ಸ್ವನಿಧಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಕಚೇರಿಗಳಿಂದ ಅರ್ಜಿಗಳನ್ನು ಬೇಗ ಕಳುಹಿಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯ ನೀಡಲು ಅವಕಾಶವಾಗುತ್ತದೆ. ಈ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ಕುರಿತು ಅರಿವು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬರುವ ತಿಂಗಳಲ್ಲಿ ಎಲ್ಲ ಯೋಜನೆಗಳನ್ನು ಕೇಂದ್ರೀಕೃತಗೊಳಿಸಿದ ಒಂದು ದೊಡ್ಡದಾದ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಆ ಕಾರ್ಯಕ್ರಮದಲ್ಲಿ ಪ್ರಸ್ತುತ ಅರ್ಹರಾದ ಎಲ್ಲ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗವುದು ಎಂದರು.


ಹಾಗು ಡಿಸೆಂಬರ್ 6 ರಂದು ನಗರದ ಫ್ರೀಡಂ ಪಾರ್ಕಿನಲ್ಲಿ 3 ದಿನಗಳ ಸ್ವದೇಶಿ ಮೇಳವನ್ನು ಏರ್ಪಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲ ಬ್ಯಾಂಕ್‌ಗಳು ಸಹಕರಿಸಬೇಕೆಂದರು.

ಮೊದಲನೇ ತ್ರೈಮಾಸಿಕದಲ್ಲಿ ಆದ್ಯತಾರಹಿತ ವಲಯದಲ್ಲಿ ರೂ.3 ಕೋಟಿ ಶಿಕ್ಷಣ ಸಾಲ ಮತ್ತು ರೂ.90 ಕೋಟಿ ಹೌಸಿಂಗ್ ಸಾಲ ನೀಡಲಾಗಿದ್ದು ಕ್ರಮವಾಗಿ ಶೇ13.04 ಮತ್ತು 16.85 ಪ್ರಗತಿ ಸಾಧಿಸಲಾಗಿದೆ. ಬ್ಯಾಂಕ್‍ಗಳು ಶಿಕ್ಷಣ ಸಾಲ ಮತ್ತು ವಸತಿ ಸಾಲಗಳಿಗೆ ಹೆಚ್ಚಿನ ಗಮನ ಹರಿಸಬೇಕೆಂದರು.
ಪ್ರಧಾನಮಂತ್ರಿಯವರು ಸೆ.17 ರಂದು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದು ಜಿಲ್ಲೆಯಲ್ಲಿಯೂ ಶೀಘ್ರದಲ್ಲೇ ಅದರ ನೋಂದಣಿ ಆರಂಭವಾಗುವುದು. ಸುಮಾರು 18 ಗುಂಪಿನ ಕುಶಲಕರ್ಮಿಗಳಿಗೆ ಈ ಯೋಜನೆಯಡಿ 1 ಲಕ್ಷದವರೆಗೆ ಸಾಲ ಸೌಲಭ್ಯ ದೊರಕಲಿದೆ. 18 ತಿಂಗಳ ಒಳಗೆ ತೀರಿಸಿದರೆ ಮತ್ತೆ ರೂ.2 ಲಕ್ಷ ಸಾಲ ಸಿಗಲಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್‍ನ್ನು ನೀಡಲಾಗುವುದು. ಕುಶಲಕರ್ಮಿಗಳಿಗೆ ತರಬೇತಿ, ಭತ್ಯೆ ನೀಡಲಾಗುವುದು ಹಾಗೂ ಅರ್ಹರಿಗೆ ಟೂಲ್ ಕಿಟ್‍ಗಳನ್ನು ನೀಡಲಾಗುವುದು. ಸಿಎಸ್‍ಸಿ ಗಳಲ್ಲಿ ಫಲಾನುಭವಿಗಳು ನೋಂದಣಿ ಆಗಬೇಕು.
ಜಿಲ್ಲೆಯಲ್ಲಿ ಶೀಘ್ರದಲ್ಲೇ ವಿಶ್ವಕರ್ಮ ಯೋಜನೆಯಡಿ ನೋಂದಣಿ ಅಭಿಯಾನವನ್ನೆ ಹಮ್ಮಿಕೊಳ್ಳಲಾಗುವುದು. ಹಾಗೂ ಕೇಂದ್ರಗಳಿಗೆ ತಾವೂ ಭೇಟಿ ನೀಡುವುದಾಗಿ ತಿಳಿಸಿದ ಅವರು ಪಿಂಚಣಿ ಯೋಜನೆ, ವಿಮೆ, ಕೃಷಿ,ವಸತಿ ಸೇರಿದಂತೆ ಎಲ್ಲ ಯೋಜನೆಗಳ ಕುರಿತು ಅರಿವು ಮತ್ತು ಪ್ರಗತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೆನರಾ ಬ್ಯಾಂಕ್ ಎಜಿಎಂ ವೆಂಕಟರಾಮುಲು ಬಿ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಟಾನಗೊಳಿಸುವಲ್ಲಿ ನಂ.1 ಜಿಲ್ಲೆಯಾಗಿ ಶಿವಮೊಗ್ಗ ಹೊರಹೊಮ್ಮಬೇಕು. ಮೊದಲನೇ ತ್ರೈಮಾಸಿಕ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕುಗಳಲ್ಲಿ ರೂ.2138.9 ಕೋಟಿ ಠೇವಣಿ ಇದ್ದು, ರೂ.16223 ಮುಂಗಡ ನೀಡಲಾಗಿದೆ. ಹಾಗೂ ತಲಾ ಶೇ.1.76 ಕೃಷಿ ಸಾಲ ಮತ್ತು ಎಂಎಸ್‍ಎಂಇ ಯಲ್ಲಿ ಪ್ರಗತಿ ಆಗಿದೆ. ಒಟ್ಟಾರೆ ಆದ್ಯತಾ ವಲಯದಲ್ಲಿ ಶೇ.1.6 ಪ್ರಗತಿಯಾಗಿದೆ.
ಪಿಎಂ ಜನಸುರಕ್ಷಾ ಯೋಜನೆಗಳಾದ ಪಿಎಂಜೆಜೆಬಿವೈ ಯಲ್ಲಿ ಶೇ100.04 ಮತ್ತು ಪಿಎಂಸ್‍ಬಿವೈ ಯೋಜನೆಯಡಿ ಶೇ101.37 ಪ್ರಗತಿ ಸಾಧಿಸುವ ಮೂಲಕ ಪಿಎಂಬಿಎಸ್‍ವೈ ಯೋಜನೆಯಡಿ ರಾಜ್ಯದಲ್ಲಿ 1ನೇ ಸ್ಥಾನ ಮತ್ತು ಜಂಟಿ ಯೋಜನೆಯಾದ ಪಿಎಂಎಸ್‍ಬಿವೈ ಮತ್ತು ಪಿಎಂಜೆಜೆಬಿವೈ ನಲ್ಲಿ 2ನೇ ಸ್ಥಾನದಲ್ಲಿದೆ. ಹಾಗೂ ಈ ಯೋಜನೆಗಳಡಿ ಕೆನರಾ ಬ್ಯಾಂಕ್ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆಯಾದ ಪಿಎಂ ಸ್ವನಿಧಿ ಯೋಜನೆಯ ಮೊದಲ ಹಂತದಲ್ಲಿ ಶೇ.99.22, ಎರಡನೇ ಹಂತದಲ್ಲಿ ಶೇ.98.17 ಮತ್ತು ಮೂರನೇ ಹಂತ ಸಾಲ ನೀಡುವಿಕೆಯಲ್ಲಿ ಬ್ಯಾಂಕುಗಳು ಶೇ.98.52 ಪ್ರಗತಿ ಸಾಧಿಸಿವೆ ಎಂದರು.

ಸರ್ಕಾರ ಬಡ ಜನತೆಗೆ ಅನುಕೂಲವಾಗಲೆಂದು ಅನೇಕ ಯೋಜನೆ/ಕಾರ್ಯಕ್ರಮಗಳನ್ನು ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಬ್ಯಾಂಕುಗಳ ಸಹಕಾರ ಅತ್ಯಗತ್ಯ.. ಬ್ಯಾಂಕುಗಳಿಗೆ ಸಹ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಜನರಿಗೆ ಸರಿಯಾದ ಮಾಹಿತಿ ಮತ್ತು ಸ್ಪಂದನೆ ನೀಡಿ ಸಹಕರಿಸಬೇಕು.
ಯೋಜನೆಗಳ ಅನುಷ್ಟಾನದಲ್ಲಿ ನಿಗದಿಗಿಂತ ಕಡಿಮೆ ಪ್ರಗತಿ ಸಾಧಿಸಿದ ಬ್ಯಾಂಕುಗಳು ಗುರಿ ಸಾಧಿಸುವೆಡೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇಲ್ಲವಾದಲ್ಲಿ ಖಂಡಿತವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಶಿಕ್ಷಣ ಸಾಲ, ವಸತಿ, ಇತರೆ ಸಾಲ ಸೌಲಭ್ಯದಡಿ ಅರ್ಜಿ ಸಲ್ಲಿಸಿ, ತಿರಸ್ಕೃತಗೊಳಿಸಿರುವುದಕ್ಕೆ ಬ್ಯಾಂಕುಗಳು ನನಗೆ ಕಾರಣ ತಿಳಿಸಬೇಕು. ಶಿಕ್ಷಣ ಸಾಲಕ್ಕೆ ಉತ್ತೇಜನ ನೀಡಬೇಕು.
ಬ್ಯಾಂಕುಗಳಲ್ಲಿ ಸುಲಭದಲ್ಲಿ ಸಾಲ/ ಸೌಲಭ್ಯ ಲಭ್ಯವಾಗುವುದಿಲ್ಲವೆಂಬ ಮನೋಭಾವ ಜನರಲ್ಲಿ ಬಂದಿದೆ. ಈ ಮನೋಭಾವ ಬದಲಾಗುವಂತೆ ಬ್ಯಾಂಕುಗಳು ಕೆಲಸ ಮಾಡಬೇಕು.
ಬ್ಯಾಂಕುಗಳಲ್ಲಿ ಸಾರ್ವಜನಿಕರೊಂದಿಗೆ ವ್ಯವಹರಿಸುವ ಅಧಿಕಾರಿ/ನೌಕರರು ಕನ್ನಡವನ್ನು ಕಲಿಯಬೇಕು.
ಸಭೆಗೆ ಗೈರಾದ ಬ್ಯಾಂಕುಗಳಿಗೆ ನೋಟಿಸ್ ಜಾರಿಗೊಳಿಸುತ್ತೇನೆ. 2 ಬಾರಿಗಿಂತ ಹೆಚ್ಚು ಗೈರಾದ ಬ್ಯಾಂಕುಗಳ ಕುರಿತು ಎಸ್‍ಎಲ್‍ಬಿಸಿ ಯ ಗಮನಕ್ಕೆ ತರುತ್ತೇನೆ.
ಪ್ರಸ್ತುತ ಜಿಲ್ಲೆಯಲ್ಲಿ 17 ಬ್ಯಾಂಕುಗಳ ಬ್ರಾಂಚ್‍ಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳಿವೆ. ಇವುಗಳ ಸಂಖ್ಯೆ 50 ಕ್ಕೆ ಹೆಚ್ಚಿಸಬೇಕು. ಆಧಾರ್‍ನಲ್ಲಿ ಸಣ್ಣಪುಟ್ಟ ಲೋಪವಿದ್ದರೂ ಯೋಜನೆ ಸೌಲಭ್ಯ ಪಡೆಯುವಲ್ಲಿ ಜನ ಪರದಾಡುತ್ತಿದ್ದು, ಸರಿಪಡಿಸುವ ಮೂಲಕ ಸಹಕರಿಸಬೇಕು.
ಕೃಷಿ ಮೂಲಭೂತ ಸೌಕರ್ಯ ನಿಧಿ ಪ್ರಗತಿಯನ್ನು ಸಾಧಿಸಬೇಕು.
– ಸ್ನೇಹಲ್ ಸುಧಾಕರ ಲೋಖಂಡೆ, ಸಿಇಓ, ಜಿ.ಪಂ

ಸಭೆಯಲ್ಲಿ ಆರ್.ಬಿ.ಐ. ಬೆಂಗಳೂರಿನ ಬಿಸ್ವಾಸ್, ನಬಾರ್ಡ್ ಡಿಡಿಎಂ ಶರತ್ ಗೌಡ ಪಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ ಹೆಚ್, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!