ಚಂದ್ರಗುತ್ತಿ ದೇವಾಲಯಕ್ಕೆ ನುಗ್ಗಿ ದೇವಿಯ ಮೂರ್ತಿ ಮುಖವಾಡವನ್ನೇ ಕಿತ್ತೆಸೆದ ದುರುಳರು
ಸೊರಬ : ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಮಲೆನಾಡಿನ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಚಂದ್ರಗುತ್ತಿ ದೇವಾಲಯದಲ್ಲಿ ಕಳ್ಳತನದ ಯತ್ನ ನಡೆದಿದ್ದು, ದೇವಿಯ ಮೂರ್ತಿಯ ಮುಖವಾಡವನ್ನೆ ದುರುಳರು
ಕಿತ್ತೆಸೆಸಿದ್ದಾರೆ.
ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಳ್ಳರು ರೇಣುಕಾ ದೇವಿಯ ಮೂರ್ತಿಯನ್ನು ಕಿತ್ತು ಬಿಸಾಡಿದ್ದಾರೆ. ಸದ್ಯ ದೊರೆತಿರುವ ಮಾಹಿತಿಯಂತೆ ದೇವಾಲಯದ ಹುಂಡಿಯನ್ನು ಕಳ್ಳರು ಒಡೆದಿಲ್ಲ.
ಇನ್ನು ಮೊನ್ನೆಯಷ್ಟೇ ಹುಣ್ಣಿಮೆಯಾಗಿದ್ದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ಹೀಗಾಗಿ, ದೇವಾಲಯದಲ್ಲಿ ಅಧಿಕ ಕಾಣಿಕೆಗಳು ಸಲ್ಲಿಕೆಯಾಗಿರುತ್ತವೆ. ಇದನ್ನು ದೋಚುವ ಯತ್ನವೂ ಸಹ ಇದು ಆಗಿರಬಹುದು ಎನ್ನಲಾಗಿದೆ.ಪ್ರಮುಖವಾಗಿ, ದೇವಾಲಯದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಭದ್ರತಾ ವ್ಯವಸ್ಥೆಗಳು ಇಲ್ಲದ ಕಾರಣ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಹುಸೇನ್ ಸರಕಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಎಸ್ಐ, ದೇವಾಲಯ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿದ್ದಾರೆ.