Chikkamagaluru | ಮಳೆ ಕೊರತೆ, ಶೇ.50 ರಷ್ಟು ಬಿತ್ತನೆ ಕಾರ್ಯ ಕುಂಠಿತ – ಡಿಸಿ
ಚಿಕ್ಕಮಗಳೂರು: ಕಳೆದ ವರ್ಷ ಮುಂಗಾರಿನಲ್ಲಿ 23,700 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ನೆಲಗಡಲೆ, ಸೂರ್ಯಕಾಂತಿ ಬಿತ್ತನೆಯಾಗಿತ್ತು. ಈ ವರ್ಷದಲ್ಲಿ 13,147 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಶೇ. 50 ರಷ್ಟು ಬಿತ್ತನೆ ಕಾರ್ಯದಲ್ಲಿ ಕುಂಠಿತವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ 60 ಕೋಟಿ ರುಪಾಯಿ ಬೆಳೆಹಾನಿ ಸಂಭವಿಸಿದೆ, ಕೃಷಿ ಬೆಳೆಗೆ 52 ಕೋಟಿ, ತೋಟಗಾರಿಕೆ ಬೆಳೆಗಳಿಗೆ 8 ಕೋಟಿ ಸೇರಿದಂತೆ ಒಟ್ಟು 60 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇವುಗಳಲ್ಲಿ ಕಡೂರು ಹಾಗೂ ಅಜ್ಜಂಪುರ ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದರು.
ಪೂರ್ವ ಮುಂಗಾರಿನಲ್ಲಿ ಕಳೆದ ವರ್ಷ 9418 ಹೆಕ್ಟೇರ್ಗಳಲ್ಲಿ ಬಿತ್ತನೆಯಾಗಿತ್ತು. ಈ ವರ್ಷದಲ್ಲಿ 5236 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಎಳ್ಳು, ಹೆಸರು, ಉದ್ದು, ಅಲಸಂದೆ ಮತ್ತು ಹತ್ತಿ ಬೆಳೆ ಕಟಾವು ಆಗಿದ್ದು, ಜೂನ್ ತಿಂಗಳಲ್ಲಿನ ಮಳೆಯ ಕೊರತೆಯಿಂದಾಗಿ ಶೇ. 30-40 ರಷ್ಟು ಇಳುವರಿ ಕುಂಠಿತಗೊಂಡಿದೆ ಎಂದು ಹೇಳಿದರು.
ತಡ ಮುಂಗಾರಿನಲ್ಲಿ ರಾಗಿ ಮತ್ತು ಭತ್ತ ಬಿತ್ತನೆ ಕಾರ್ಯ ನಡೆಯಲಿದ್ದು, ಕಳೆದ ವರ್ಷ 63702 ಹೆಕ್ಟೇರ್ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 61325 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಆಗಸ್ಟ್ ಮಾಹೆಯಲ್ಲಿ ತೀವ್ರ ಮಳೆ ಕೊರತೆಯಾಗಿದ್ದರಿಂದ ಇಳುವರಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಕುಂಠಿತವಾಗಿದೆ ಎಂದರು
ಹಿಂಗಾರು ಬೆಳೆಯಿಂದ ಮತ್ತು ಮೇವಿನ ಬೀಜದ ಮಿನಿ ಕಿಟ್ ಬಿತ್ತನೆಯ ಉತ್ಪಾಧನೆಯಿಂದ ಸರಾಸರಿ 32011 ಟನ್ ಮೇವು ಲಭ್ಯವಾಗುವ ಸಾಧ್ಯತೆ ಇದೆ. ಪ್ರಸ್ತುತ 25 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. 2023-24ನೇ ಸಾಲಿನ ಮುಂಗಾರು ಬೆಳೆಯಲ್ಲಿ 22 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 45 ವಾರಗಳಿಗೆ ಆಗುವಷ್ಟು ಮೇವಿದೆ ಎಂದು ಹೇಳಿದರು.
ಅಮೃತ್ ಮಹಲ್ ಕಾವಲಿನಲ್ಲಿ ಜಾನುವಾರುಗಳಿಗೆ ಮೇವು ಬೆಳೆಸಲು ಉದ್ದೇಶಿಸಲಾಗಿದ್ದು, ಇಲ್ಲಿ 3 ಬೋರ್ ವೆಲ್ಗಳ ಅವಶ್ಯಕತೆ ಇರುವುದರಿಂದ ಬೋರ್ವೆಲ್ ಕೊರೆಸಿ ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಬೀಜದ ಕಿಟ್ಗಳನ್ನು ನೀಡಿ ಮೇವು ಬೆಳೆಸಲು ಉದ್ದೇಶಿಸಲಾಗಿದೆ ಎಂದರು.
ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಲು ಹಾಗೂ ನೀರನ್ನು ಮಿತವಾಗಿ ಬಳಸುವತ್ತ ರೈತರು ಗಮನ ಹರಿಸಬೇಕು. ಹನಿ ನೀರಾವರಿಗೆ ಒತ್ತು ನೀಡಬೇಕು, ಬೋರ್ವೆಲ್ ಸುತ್ತ ಇಂಗು ಗುಂಡಿಯನ್ನು ನಿರ್ಮಾಣ ಮಾಡಬೇಕು. ಹೋಬಳಿವಾರು ಅಧಿಕಾರಿಗಳು ಸಭೆಯನ್ನು ನಡೆಸಿ ಬರ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ರೈತರು ಫ್ರೂಟ್ ತಂತ್ರಾಂಶದಲ್ಲಿ ಬೆಳೆ ಮಾಹಿತಿ ಹಾಕಿದರೆ ಅವರ ಬ್ಯಾಂಕ್ ಖಾತೆಗೆ ಹಣ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ 312 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದು, ಅಂತಹ ಗ್ರಾಮಗಳನ್ನು ಗುರುತು ಮಾಡಲಾಗಿದೆ. ಸದ್ಯ 3 ತಾಲೂಕುಗಳಲ್ಲಿ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಅವರು ಹೇಳಿದರು.
ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿ, ಕುರುಬರಹಳ್ಳಿ, ಜೇನುಗದ್ದೆ, ಯರೇಹಳ್ಳಿ, ಅಜ್ಜಂಪುರ ತಾಲೂಕಿನ ತ್ಯಾಗದಕಟ್ಟೆ, ಎನ್.ಆರ್. ಪುರ ತಾಲೂಕಿನ ನೇರಳೆ, ಮರಾಠಿ ಕ್ಯಾಂಪ್ಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಅಗತ್ಯಬಿದ್ದರೆ ಬೋರ್ವೆಲ್ಗಳನ್ನು ಇನ್ನಷ್ಟು ಆಳವಾಗಿ ತೋಡಬೇಕೆಂದು ಸೂಚನೆ ನೀಡಲಾಗಿದೆ. ನೀರಿನ ಸಮಸ್ಯೆ ನಿವಾರಣೆಗಾಗಿ ಟ್ಯಾಂಕರ್ ಮೂಲಕ ಖಾಸಗಿಯವರಿಂದ ನೀರು ಸರಬರಾಜು ಮಾಡಲು ಸ್ಥಳೀಯ ಮಟ್ಟದಲ್ಲಿ ಕೊಟೇಷನ್ ಕರೆಯಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ ಉಪಸ್ಥಿತರಿದ್ದರು.