ಹೊಸನಗರ : ಸಹೋದ್ಯೋಗಿಯ ಸಂಸಾರದ ವಿಚಾರವಾಗಿ ಬುದ್ದಿವಾದ ಹೇಳಿದಕ್ಕೆ ಕೊಲೆ ನಡೆದ ಘಟನೆ ತಾಲ್ಲೂಕಿನ ಸೊನಲೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತನನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಇಚನಹಳ್ಳಿ ತಾಂಡದ ಟಿಂಬರ್ ಕಟಿಂಗ್ ಕಾರ್ಮಿಕ ಪರಶುರಾಮ ರಾಮಪ್ಪ ಲಮಾಣಿ ಎಂದು ಗುರುತಿಸಲಾಗಿದೆ.
ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ ಪುನ್ನಪ್ಪ ಲಮಾಣಿ ಎಂಬ ಇಬ್ಬರು ಆರೋಪಿಗಳನ್ನು ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಲಾಗಿದೆ.
ಘಟನಾ ವಿವರ :
ಇಚನಹಳ್ಳಿ ತಾಂಡದ ಆರು ಕಾರ್ಮಿಕರು ಕಳೆದ ಮೂರು ತಿಂಗಳಿನಿಂದ ಹೊಸನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಸೊನಲೆ ಗ್ರಾಮದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದ ಅವರು ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದರು.

ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ, ಕೆಲವರು ಹೊಸನಗರ ಸಂತೆಯಿಂದ ತರಕಾರಿ ಹಾಗೂ ಮದ್ಯಪಾನ ಸಾಮಗ್ರಿಗಳನ್ನು ತರಿಸಿಕೊಂಡು ಚಿಕನ್ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅರುಣನ ಕುಟುಂಬದ ಬಗ್ಗೆ ಪರಶುರಾಮ ಲಮಾಣಿ ಬುದ್ದಿವಾದ ಹೇಳಿಕೆಯಿಂದ ಮಾತಿನ ಜಗಳ ಆರಂಭವಾಗಿದೆ. ಸಹೋದ್ಯೋಗಿಗಳು ಮೊದಲಿಗೆ ಜಗಳವನ್ನು ಶಮನಗೊಳಿಸಲು ಯತ್ನಿಸಿದರೂ, ಕೆಲವೇ ಸಮಯದಲ್ಲಿ ಅರುಣ ಮತ್ತೆ ಮನೆಗೆ ನುಗ್ಗಿ ಪರಶುರಾಮರ ಕಾಲುಗಳನ್ನು ಹಿಡಿದಿದ್ದು, ಪರಶುರಾಮ ಶೆಟ್ಟಪ್ಪ ತಂಬೂರಿ ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕುವನ್ನು ತೆಗೆದುಕೊಂಡು ಪರಶುರಾಮ ಲಮಾಣಿ ಅವರ ಕುತ್ತಿಗೆಗೆ ಇರಿದಿದ್ದಾನೆ.
ಚಾಕು ಇರಿತದಿಂದ ತೀವ್ರ ರಕ್ತಸ್ರಾವಗೊಂಡ ಪರಶುರಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತುರ್ತು 112 ಸೇವೆಗೆ ಕರೆ ಮಾಡಲಾಗಿತ್ತಾದರೂ, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪರಶುರಾಮರ ಸಹೋದ್ಯೋಗಿ ಲಕ್ಷ್ಮಣ ಗೋವಿಂದ ರಾಠೋಡ ಅವರ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಶನಿವಾರ ತಡರಾತ್ರಿ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆಯನ್ನು ಹೊಸನಗರ ಪೊಲೀಸ್ ಠಾಣೆಯ ಪಿಎಸ್ಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಮುಂದುವರೆದಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





