ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ ; ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ ; ಗರಂ ಆದ ಆರಗ

0 801

ತೀರ್ಥಹಳ್ಳಿ : ಮನೆಯೊಂದರಲ್ಲಿ ಪುರಾತನ ಕಾಲದ ಜಿಂಕೆ ಕೊಂಬು ಹಾಗೂ ಕೋಣದ ಕೊಂಬುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಮನೆಯ ಯಜಮಾನನ್ನು ವಶಕ್ಕೆ ಪಡೆಯಲು ಮುಂದಾದ ಘಟನೆ ತಾಲೂಕಿನ ಹಣಗೆರೆ ಸಮೀಪದ ಬಸವನಗದ್ದೆಯಲ್ಲಿ ನಡೆದಿದೆ.

ಇಲ್ಲಿನ ಬ್ರಾಹ್ಮಣ ಕುಟುಂಬದ ಪ್ರಸನ್ನ ಎಂಬುವವರ ಮನೆಯಲ್ಲಿ ಸುಮಾರು ನೂರಾರು ವರ್ಷಗಳ ಹಿಂದಿನ ಅಲ್ಲದೆ ಕಾಡಿನಲ್ಲಿ ಸಿಕ್ಕಿದ ಜಿಂಕೆ ಕೊಂಬು ಹಾಗೂ ಕೋಣದ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಆದರೆ ಈ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಇಂದು ಬೆಳಿಗ್ಗೆ ಮನೆಗೆ ಬಂದ ಅಧಿಕಾರಿಗಳ ತಂಡ ಮನೆಯಲ್ಲಿದ್ದ ಪುರಾತನ ಕಾಲದ ಜಿಂಕೆ ಕೊಂಬು, ಹಾಗೂ ಕಾಡುಕೋಣದ ಕೊಂಬನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆ ಬಳಿಕ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಕುಟುಂಬದಲ್ಲಿ ವಯಸ್ಸಾಗಿರುವ ಅನಾರೋಗ್ಯಕ್ಕೆ ಒಳಗಾಗಿದ್ದ ಯಜಮಾನನ್ನು ಬಂಧಿಸಲು ಮುಂದಾಗಿದ್ದಾರೆ.

ಆದರೆ ಈ ವಿಚಾರ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ಬಂದಿದ್ದು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿ ಅರಣ್ಯ ಅಧಿಕಾರಿಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮನೆಯ ಯಜಮಾನನ್ನು ಬಂಧಿಸುವುದಾದರೆ ಮೊದಲು ನನ್ನನ್ನು ಬಂಧಿಸಿ ಎಂದು ಗ್ರಾಮಸ್ಥರ ಜೊತೆ ಸೇರಿ ಅರಣ್ಯ ಅಧಿಕಾರಿಗಳ ನಡೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಶೋಧ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ‌ 18 ಜಿಂಕೆ ಮತ್ತು ಕಡವೆ ಕೊಂಬು, 9 ಕಾಡುಕೋಣ ಕೊಂಬು, 10 ಕೆ.ಜಿ. ಶ್ರೀಗಂಧ ಹಾಗೂ ಒಂದು ಬಂದೂಕು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ತನಿಖಾಧಿಕಾರಿ ಶಿವಮೊಗ್ಗ ವನ್ಯಜೀವಿ ವಿಭಾಗದ ಎಸಿಎಫ್‌ ಬಿ.ಸುರೇಶ್‌, ಹಣಗೆರೆ ಆರ್‌ಎಫ್‌ಒ ಪವನ್‌ ಕುಮಾರ್‌ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪ್ರಸನ್ನಕುಮಾರ್‌ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಬಂಧನವನ್ನು ಮುಂದೂಡಲಾಗಿದೆ ಎಂದು ಎಸಿಎಫ್‌ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!