ಚಂದ್ರಗುತ್ತಿ ದೇವಸ್ಥಾನದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಖಂಡಿಸಿ ಮನವಿ
ಶಿಕಾರಿಪುರ : ಇತ್ತೀಚಿಗೆ ಸೊರಬ ತಾಲ್ಲೂಕಿನ ಶ್ರೀಕ್ಷೇತ್ರ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಕೆಲ ಕಿಡಿಗೇಡಿಗಳು ಅಟ್ಟಹಾಸ ನಡೆಸಿರುವುದನ್ನು ಖಂಡಿಸಿ ಶಿಕಾರಿಪುರ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಿಯ ಭಕ್ತ ಸಮೂಹದಿಂದ ಈ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ನಾಡಿನಾದ್ಯಂತ ಅಪಾರ ಭಕ್ತ ವೃಂದವನ್ನು ಹೊಂದಿರುವ ಸೊರಬ ತಾಲ್ಲೂಕಿನ ಇತಿಹಾಸ ಪ್ರಸಿದ್ಧಿಯಾಗಿರುವ ಚಂದ್ರಗುತ್ತಿ ರೇಣುಕಾಂಬ ದೇವಿಯ ದೇವಾಲಯದಲ್ಲಿ ಆ. 2 ರ ಮಧ್ಯರಾತ್ರಿ ಕೆಲ ಕಿಡಿಗೇಡಿಗಳಿಂದ ಕಳ್ಳತನಕ್ಕೆ ಪ್ರಯತ್ನ ನಡಿಸಲಾಗಿದೆ.
ಈ ದೇವಾಯವು ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದ್ದು, ಈ ತಿಂಗಳು ಅಧಿಕ ಶ್ರಾವಣ ಮಾಸದ ಮಂಗಳವಾರದಂದು ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ದೇವಿಗೆ ಉಡಿ ಮತ್ತು ಕಾಣಿಕೆಗಳನ್ನು ನೀಡಲಾಗಿರುವುದನ್ನು ಗಮನಿಸಿರುವ ಕೆಲ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ. ಇಲ್ಲಿನ ದೇವಿಯ ಮೂರ್ತಿ, ವಿವಿಧ ರೀತಿಯ ಪೂಜಾ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದೆ. ಇದರಿಂದಾಗಿ ದೇವಿಯ ಆರಾಧಕರಿಗೆ, ಅಪಾರ ಭಕ್ತ ವೃಂದದವರಿಗೆ ಆತಂಕ ಮೂಡಿದ್ದು, ಕೂಡಲೇ ಇದರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಅವರ ಮೇಲೆ ಕಠಿಣ ಕರ್ಮ ಕೈ ಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರಗುತ್ತಿ ರೇಣುಕಾಂಬ ದೇವಿಯ ಭಕ್ತ ಸಮೂಹದ ಅದ್ಯಕ್ಷ ಸಿ ಆರ್ ಪರಶುರಾಮ್ ಚೌಟಗಿ,ಸಿ ಜೆ ಮೋಹನ್ ಚೌಟಗಿ, ವೇಣುಗೋಪಾಲ್, ಮಾರುತಿ ಹೆಚ್, ಗುಡದಯ್ಯ ಬಿ ಎಸ್, ಪ್ರಶಾಂತ್ ಆರ್, ಪಾಲಾಕ್ಷಪ್ಪ ಹೆಚ್ ಬಿ ಸೇರಿದಂತೆ ಅನೇಕ ಭಕ್ತ ಸಮೂಹದವರು ಹಾಜರಿದ್ದರು.