ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ | ಯಾವ ಪಕ್ಷ ಎಂಬುದು ಇನ್ನೆರಡು ದಿನದಲ್ಲಿ ನಿರ್ಧಾರ ; ಆಯನೂರು ಮಂಜುನಾಥ್

ಶಿವಮೊಗ್ಗ : ಕಾದು ನೋಡುವ ತಂತ್ರಗಾರಿಕೆಯನ್ನು ಆಯನೂರು ಮಂಜುನಾಥ್ ಮತ್ತೆರಡು ದಿನಗಳ ಕಾಲ ಮುಂದೂಡಿದ್ದಾರೆ. ಇಂದು ಅವರು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ರ್ಸ್ಪಧಿಸುವ ತಮ್ಮ ನಿರ್ಧಾರವನ್ನು ಇನ್ನು ಎರಡು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಆದರೆ ಯಾವ ಪಕ್ಷ ಎಂಬುದು ಇನ್ನು ಎರಡು ದಿನಗಳಲ್ಲಿ ನಿರ್ಧಾರ ಆಗಲಿದೆ. ಒಂದೇ ದಿನದಲ್ಲಿ ಶಿವಮೊಗ್ಗದ ರಾಜಕೀಯ ಮಗ್ಗಲು ಬದಲಾವಣೆ ಕಂಡಿದೆ. ಹಾಗಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದರು.

ಈಶ್ವರಪ್ಪ ಪರ ಅಭಿಮಾನಿಗಳು ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆಯನೂರು, ಈಶ್ವರಪ್ಪ ನಿರ್ಗಮನ ತಮಗೆ ಆಘಾತಕಾರಿಯಾಗಿದೆ. ಅವರ ಅಭಿಮಾನಿಗಳು ಪ್ರತಿಭಟನೆ ಮಾಡುವುದು ಸಹಜವೇ ಆಗಿದೆ. 30 ವರ್ಷಗಳ ರಾಜಕಾರಣ ಮಾಡಿದಾಗ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಈಶ್ವರಪ್ಪ ಅವರು ಎಲ್ಲರೊಂದಿಗೆ ಸಂತೋಷದಿಂದ ಇದ್ದವರು. ಅವರಿಗೆ ಯಾರೇ ಶತ್ರುಗಳಿಲ್ಲ. ಅವರೇ ಮುಂದುವರೆಯಬೇಕು ಎಂದು ಕಾರ್ಯಕರ್ತರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದರು.

ಈಶ್ವರಪ್ಪ ಅವರಿಗೆ ತಮ್ಮಲ್ಲೇ ಇಬ್ಬರು ಶತ್ರುಗಳಿದ್ದರು. ಒಂದು ಅವರ ಮಾತುಗಳ ಮೇಲೆ ಅವರಿಗೇ ನಿಯಂತ್ರಣ ಇರಲಿಲ್ಲ. ಮತ್ತೊಂದು ಪುತ್ರ ವ್ಯಾಮೋಹ. ಇದನ್ನು ಹೊರತುಪಡಿಸಿ ಬೇರೆ ಯಾರೂ ಶತ್ರುಗಳು ಅವರಿಗೆ ಇರಲಿಲ್ಲ. ಇವೆರಡನ್ನೂ ನಿಯಂತ್ರಣ ಮಾಡಿದ್ದರೆ ಗುತ್ತಿಗೆದಾರನ ಸಾವು ಆಗುತ್ತಿರಲಿಲ್ಲ. ಜೊತೆಗೆ ರಾಜಕೀಯ ನಿವೃತ್ತಿಯೂ ಆಗುತ್ತಿರಲಿಲ್ಲ ಎಂದರು.

ಈಶ್ವರಪ್ಪ ಅವರು ನನ್ನ ಟಾರ್ಗೆಟ್ ಅಲ್ಲ. ಈಶ್ವರಪ್ಪ ಅವರು ಎದುರಾಳಿಯೂ ಅಲ್ಲ. ಕಾರ್ಮಿಕರ ಪರವಾಗಿ ವಿಧಾನ ಪರಿಷತ್‌ನಲ್ಲಿ ಪರಿಣಾಮಕಾರಿಯಾಗಿ ಮಂಡಿಸಲು ಆಗಲಿಲ್ಲ. ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ಇನ್ನು ಅತಿಥಿ ಶಿಕ್ಷಕರು, ಎನ್‌ಪಿಎಸ್-ಒಪಿಎಸ್ ಚರ್ಚೆ ನಡೆದರೂ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ಹಾಗಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿ, ಇದಕ್ಕೆಲ್ಲಾ ಪರಿಹಾರ ಕೊಡಿಸುವ ಕನಸು ಹೊಂದಿದ್ದೇನೆ. ಅವಕಾಶ ದೊರೆತಲ್ಲಿ ವಿಧಾನಸಭೆ ಪ್ರವೇಶ ಮಾಡಲು ನಿರ್ಧರಿಸಿದ್ದೇನೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!