ಕಾರ್ಯಕರ್ತರ ಪರಿಶ್ರಮದಿಂದ ಮಾತ್ರ ರಾಜಕೀಯ ಪಕ್ಷಗಳ ಸಂಘಟನೆ ಸಾಧ್ಯ ; ಆರ್.ಎಂ. ಮಂಜುನಾಥ್ ಗೌಡ

0 141


ರಿಪ್ಪನ್‌ಪೇಟೆ : ಯಾವುದೇ ಒಂದು ರಾಜಕೀಯ ಪಕ್ಷಗಳು ಸಂಘಟನೆ ಆಗಬೇಕಾದರೆ ಆ ಪಕ್ಷದ ಕಾರ್ಯಕರ್ತರ ಪರಿಶ್ರಮ, ನಿಷ್ಠೆ ಮತ್ತು ಪ್ರಾಮಾಣಿಕತನ ಮೂಲ ಕಾರಣವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ಆರ್‌.ಎಂ. ಮಂಜುನಾಥ್ ಗೌಡ ಹೇಳಿದರು.


ಪಟ್ಟಣದ ಸಾಗರ ರಸ್ತೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಗಣಪತಿ ಗವಟೂರುರವರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು ರಾಜ್ಯದ ಜನತೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜನತೆಗೆ ಹಾಗೂ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ. ಈಗಾಗಲೇ ಅದರ ಫಲಾನುಭವಿಗಳು ಆ ಗ್ಯಾರಂಟಿಗಳ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ಯುವಶಕ್ತಿ ಪದವಿದರರಿಗೆ ಇರುವ ಒಂದು ಗ್ಯಾರಂಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು ಈಗಾಗಲೇ ರಾಜ್ಯ ಸರ್ಕಾರ ಆ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದರು.


ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದ ಕಾರ್ಯಕರ್ತರಿಂದ ಹಿಡಿದು ರಾಜ್ಯಮಟ್ಟದ ನಾಯಕರುಗಳ ವರೆಗೂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ಹಗಲಿರಳು ಶ್ರಮಿಸಿದರ ಫಲವಾಗಿ ಇಂದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಪರಿಷತ್ತಿಗಾಗಿ ನಡೆಯುವ ಶಿಕ್ಷಕರ ಕ್ಷೇತ್ರದ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಶ್ರಮಿಸಬೇಕು. ಕಾರ್ಯಕರ್ತರುಗಳು ಹಾಗೂ ಮುಂಚೂಣಿಯಲ್ಲಿರುವ ಮುಖಂಡರುಗಳು ತಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಿದಾಗ ಮಾತ್ರ ಪಕ್ಷದ ಅಭ್ಯರ್ಥಿಯ ಗೆಲುವು ಮತ್ತು ಸಂಘಟನೆಗೆ ಕಾರಣವಾಗುತ್ತದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ಈ ಸಂದರ್ಭದಲ್ಲಿ ಹೇಳಿದರು.


ಕೇಂದ್ರದಲ್ಲಿರುವ ಬಿಜೆಪಿ ಸರಕಾರವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ವಿರೋಧ ಪಕ್ಷದ ನಾಯಕರುಗಳಿಗೆ ಮತ್ತು ಮುಖಂಡರುಗಳಿಗೆ ಹೆಣೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಆ ಪಕ್ಷದ ಕೀಳು ಮಟ್ಟದ ರಾಜಕೀಯ ವರ್ತನೆಯನ್ನು ತೋರಿಸುತ್ತದೆ ಎಂದು ಹೇಳಿದರು.


ರಾಷ್ಟ್ರದ ಹಾಗೂ ರಾಜ್ಯದ ಜನತೆ ಬಿಜೆಪಿಯ ಪೊಳ್ಳು ಭರವಸೆಯಿಂದ ಬೇಸತ್ತು ಈ ಬಾರಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ವಹಿಸಿದ್ದರು.


ನೂತನ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಗವಟೂರು ಗಣಪತಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಿ.ಪಿ ರಾಮಚಂದ್ರ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ. ಇ ಮಧುಸೂದನ್, ಆಸಿಫ್ ಭಾಷಾ ಸಾಬ್, ಪ್ರಕಾಶ್ ಪಾಲೇಕರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ, ಅಮೀರ್ ಹಂಜಾ ಎಂ ಎಂ ಪರಮೇಶ್, ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಗೌಡ, ಜಿ.ಆರ್. ಗೋಪಾಲಕೃಷ್ಣ ಕೆರೆಹಳ್ಳಿ ರವಿ, ಬಿಎಸ್ಎನ್ಎಲ್ ಶ್ರೀಧರ್, ಉಮೇಶ್ ಗೌಡ, ಕೆರೆಹಳ್ಳಿ ನರಸಿಂಹ, ಮಳವಳ್ಳಿ ಮಂಜು, ಸೇರಿದಂತೆ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!