ಕೆಎಸ್ಆರ್ಟಿಸಿ ಬಸ್ ಮಾರ್ಗ ವಿಸ್ತರಿಸುವಂತೆ ಸಚಿವ ರಾಮಲಿಂಗರೆಡ್ಡಿ ಭೇಟಿ ಮಾಡಿದ ಮಾಜಿ ಶಾಸಕ ಬಿ.ಸ್ವಾಮಿರಾವ್
ಹೊಸನಗರ: ತಾಲೂಕಿನ ಸೊನಲೆ ಗ್ರಾಮಕ್ಕೆ ಸರ್ಕಾರಿ ಬಸ್ ಮಾರ್ಗವನ್ನು ವಿಸ್ತರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಬುಧವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸೊನಲೆ ಗ್ರಾಮವು ರಾಜ್ಯದ ಅಭಿವೃದ್ದಿ ಹೊಂದಿರುವ ಆಯ್ದ ಮಾದರಿ ಗ್ರಾಮಗಳಲ್ಲಿ ಒಂದಾಗಿದ್ದು ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ.
ಈ ಗ್ರಾಮದಲ್ಲಿ ಪಂಚಾಯತಿ ಕಟ್ಟಡ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಬ್ಯಾಂಕ್ ಸೌಲಭ್ಯ, ಸಹಕಾರ ಸಂಘ ಸೇರಿದಂತೆ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀ ರಾಮೇಶ್ವರ ದೇವಾಲಯವಿದ್ದು, ಇಲ್ಲಿನ ಅನೇಕ ನಿವಾಸಿಗಳು ಉದ್ಯೋಗಕ್ಕಾಗಿ, ಹೈಕೋರ್ಟ್, ಸರ್ಕಾರಿ ಕಾರ್ಯಗಳ ನಿಮಿತ್ತ ದೂರದ ಬೆಂಗಳೂರಿಗೆ ಪ್ರತಿನಿತ್ಯ ಖಾಸಗಿ ಬಸ್ ಮೂಲಕವೇ ಸಂಚರಿಸುವಂತಾಗಿದೆ.
ನಿತ್ಯ ಬೆಂಗಳೂರಿನಿಂದ ಸೊನಲೆ ಸಮೀಪದ ಹುಂಚ ಗ್ರಾಮಕ್ಕೆ ಪ್ರತಿ ನಿತ್ಯ ಬಂದು ಅಲ್ಲೆ ನಿಲುಗಡೆ ಆಗುವ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ನ್ನು 9 ಕಿ.ಮೀ. ಹೆಚ್ಚುವರಿ ಓಡಿಸಿ ಸೊನಲೆ ಗ್ರಾಮದವರೆಗೂ ಮಾರ್ಗ ವಿಸ್ತರಣೆ ಮಾಡಿ ಬಸ್ ನಿಲುಗಡೆ ಮಾಡುವಂತೆ ತಮ್ಮ ಮನವಿ ಪತ್ರದಲ್ಲಿ ಅವರು ಕೋರಿದ್ದು, ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ ಎನ್ನಲಾಗಿದೆ.