ಜು.21 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ

0 36


ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭವನ್ನು ಜು.21 ರ ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ತಿಳಿಸಿದರು.


ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಇವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ ಜರುಗಲಿದ್ದು, ಪದವೀಧರರಿಗೆ ಪದವಿ ಪ್ರಧಾನ ಮಾಡುವರು. ಕೃಷಿ ಸಚಿವರು ಹಾಗೂ ವಿವಿ ಸಹ-ಕುಲಾದಿಪತಿಗಳಾದ ಎನ್.ಚಲುವರಾಯಸ್ವಾಮಿ ಗೌರವ ಉಪಸ್ಥಿತಿ ಇರಲಿದೆ. ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು 8ನೇ ಘಟಿಕೋತ್ಸವ ಭಾಷಣ ಮಾಡುವರು ಎಂದು ಇಂದು ನವುಲೆಯ ಕೃಷಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.


37 ಚಿನ್ನದ ಪದಕ ಪ್ರದಾನ :

8ನೇ ಘಟಿಕೋತ್ಸವದಲ್ಲಿ 409 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, 101 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳು ಪಿ.ಹೆಚ್‍ಡಿ, ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ 08 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಇವರಿಗೆ ಒಟ್ಟು 15 ಚಿನ್ನದ ಪದಕಗಳನ್ನು ನೀಡಲಾಗುವುದು. 14 ಎಂ.ಎಸ್ಸಿ ವಿದ್ಯಾರ್ಥಿಗಳು, 07 ಪಿಹೆಚ್‍ಡಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಒಟ್ಟು 37 ಚಿನ್ನದ ಪದಗಳನ್ನು ನೀಡಲಾಗುವುದು.


ವಿಶ್ವವಿದ್ಯಾಲಯ ಈ ವರ್ಷ ಹಲವಾರು ವಿಶಿಷ್ಟ ಸಾಧನೆಗಳಿಗೆ ಸಾಕ್ಷಿಯಾಗಿದ್ದು, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆಯಡಿ ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲೇ ಮೊದಲ ಬಾರಿಗೆ ಐ.ಓ.ಟಿ ಸ್ಮಾರ್ಟ್ ಕೃಷಿ, ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾಯೋಗಿಕ ಕಲಿಕೆ ಪ್ರಾರಂಭಿಸಿದ್ದು 20 ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣಗೊಳಿಸಿದೆ. ಕೃಷಿಯಲ್ಲಿ ಗಣಕ, ಡ್ರೋನ್ ಹಾಗೂ ರೋಬೋಟ್ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ ಮೊದಲ ಬಾರಿಗೆ ಪ್ರೊಗ್ರಾಮಿಂಗ್ ಫಾರ್ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯವನ್ನು ಅಳವಡಿಸಲಾಗಿದೆ.


ಪದವಿ ಹಂತದಲ್ಲಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ, ತರಬೇತಿಗೊಳಿಸುವ ವಿಶಿಷ್ಟವಾದ, ಅಂತರರಾಷ್ಟ್ರೀಯ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇದರಡಿ ನಾಲ್ಕು ವಿದ್ಯಾರ್ಥಿನಿಯರು ಅಮೆರಿಕಾದ ಕನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿದ್ದಾರೆ. ಆರು ವಿದ್ಯಾರ್ಥಿಗಳು ಜರ್ಮನಿಯ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿರುವುದು ವಿಶೇಷ ಎಂದರು.


ಈ ಸಾಲಿನಲ್ಲಿ ಜೈವಿಕ ಶಿಲೀಂದ್ರ ನಾಶಕಗಳ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ 15 ಟನ್ ಉತ್ಪಾದಿಸಿ, ಮಾರಾಟ ಮಾಡಿ ರೂ. 6.5 ಲಕ್ಷ ನಿವ್ವಳ ಲಾಭಗಳಿಸಿದ್ದಾರೆ. ಪ್ರತಿ ವಿದ್ಯಾರ್ಥಿಯು ರೂ. 20 ಸಾವಿರ ಆದಾಯ ಗಳಿಸಿರುವುದು ಹೆಮ್ಮೆಯ ವಿಚಾರ.


2023 ರ ಜನವರಿ 06 ರಿಂದ 18 ರಂದು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ 8ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಯುವ ಲಹರಿಯಲ್ಲಿ ಕೃಷಿ ಮಹಾವಿದ್ಯಾಲಯ, ಇರುವಕ್ಕಿಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದ 4ನೇ ಅಂತರ ವಿಶ್ವವಿದ್ಯಾಲಯದ ಆಗ್ನೇಯವಲಯ ಯುವಜನೋತ್ಸವದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ, ಬಹುಮಾನ ಪಡೆದಿರುತ್ತಾರೆ.


2020-21 ನೇ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ(ಎನ್‍ಎಸ್‍ಎಸ್)ಯಡಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದಿದೆ.


ಹೊಸ ಭತ್ತದ ತಳಿ:

ವಿಶ್ವವಿದ್ಯಾಲಯವು ಈ ವರ್ಷ 3 ಭತ್ತದ ತಳಿಗಳನ್ನು ಬಿಡುಗಡೆ ಮಾಡಿದೆ. ವಲಯ 7ಕ್ಕೆ ಸೂಕ್ತವಾದ ಅಧಿಕ ಇಳುವರಿ ಕೊಡುವ ಸಹ್ಯಾದ್ರಿ, ಸಿರಿ, ಗುಡ್ಡಗಾಡು ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಜಲಮುಕ್ತಿ ಹಾಗೂ ಕರಾವಳಿ ಭಾಗದ ಮಜಲು ಹಾಗೂ ಬೆಟ್ಟು ಗದ್ದೆಗಳಲ್ಲಿ ಮುಂಗಾರಿನಲ್ಲಿ ಬೆಳೆಯಬಹುದಾದ ಸಹ್ಯಾದ್ರಿ, ಸಪ್ತಮಿ ತಳಿಗಳು ಆ ಭಾಗದ ರೈತರಿಗೆ ಆಶಾಕಿರಣಗಳಾಗಿವೆ.
ತಳಿ ಅಭಿವೃದ್ಧಿ, ಬೆಳೆ ಉತ್ಪಾದನೆ, ಸಸ್ಯಸಂರಕ್ಷಣೆ, ಯಾಂತ್ರೀಕೃತ ಬೇಸಾಯ, ಮೌಲ್ಯವರ್ಧನೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ 13 ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಮತ್ತು 15 ತಾಂತ್ರಿಕತೆಗಳನ್ನು ರೈತರ ಹೊಲದಲ್ಲಿ ಕ್ಷೇತ್ರ ಪ್ರಯೋಗ ಮಾಡಲು ಶಿಫಾರಸ್ಸು ಮಾಡಲಾಗಿದೆ.


ಪ್ರಸಕ್ತ ವರ್ಷದಲ್ಲಿ 44 ಯೋಜನೆಗಳಿಗೆ ಇತರ ಧನಸಹಾಯ, ಸಂಸ್ಥೆಯಿಂದ ಸುಮಾರು ರೂ. 1.19 ಕೋಟಿ ಅನುದಾನ ಬಂದಿರುತ್ತದೆ. ಆರ್‍.ಕೆ.ವಿ.ವೈ ಅಡಿ 21 ಸಂಶೋಧನಾ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಸರರ್ಕಾರದ ಕಪೆಕ್ ನಿಂದ ವಿಶ್ವವಿದ್ಯಾಲಯಕ್ಕೆ ‘ಒಂದು ಜಿಲ್ಲೆ ಒಂದು ಉತ್ಪನ್ನ’ ದಡಿಯಲ್ಲಿ ಶಿವಮೊಗ್ಗಕ್ಕೆ ಅನಾನಸ್, ಮೂಡಿಗೆರೆಗೆ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿಗೆ ನೆಲಗಡಲೆ ಬೆಳೆಗಳ ಸಂಶೋಧನೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ರೂ.5.68 ಕೋಟಿ ನೀಡಲಾಗಿದೆ. ನೈಸರ್ಗಿಕ ಕೃಷಿ ಯೋಜನೆಯನ್ನು ಅಭಿವೃದ್ಧಿಗೊಳಿಸಲು ರೂ.252 ಕೋಟಿ ಅನುದಾನ ದೊರೆತಿದೆ.ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವೈಜ್ಞಾನಿಕ -ಸಂಪನ್ಮೂಲ ಮತ್ತು ಜಲ ಸಂಪನ್ಮೂಲ ಸಮೀಕ್ಷೆಗಾಗಿ ಹಾಗೂ ಅವುಗಳ ಪುನಶ್ವೇತನಕ್ಕಾಗಿ ರೂ.3.68 ಕೋಟಿ ಅನುದಾನವು ವಿಶ್ವವಿದ್ಯಾಲಯಕ್ಕೆ ದೊರಕಿರುತ್ತದೆ.
ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆಗಳಾದ ಭತ್ತ (ಹೊನ್ನಂಪೇಟೆ ಮತ್ತು ಬ್ರಹ್ಮಾವರ), ಸಮಗ್ರ ಕೃಷಿ ಪದ್ಧತಿ (ಕತ್ತಲಗೆರೆ), ಬೇರುಗಂಟು (ಶಿವಮೊಗ್ಗ), ಸಾರಿಬಾರು ಪದಾರ್ಥ (ಮೂಡಿಗೆರೆ), ಪಾಮ್ಸ್ (ಅಡಿಕೆ) ಹೊನ್ನವಿಲ್ಲ, ಪಾಮ್ಸ್ (ತಾಳಬೆಳೆ) ಬಾವಿಕರ, ತಂಬಾಕು (ಶಿವಮೊಗ್ಗ), ಬೆಳ್ಳುಳ್ಳಿ ಮತ್ತು ಈರುಳ್ಳಿ (ಹಿರಿಯೂರು), ಅರಣ್ಯ (ಪೊನ್ನಂಪೇಟೆ), ನೆಲಗಡಲೆ (ಹಿರಿಯೂರು), ಸಿರಿಧಾನ್ಯಗಳು (ಹಿರಿಯೂರು), ಮೆಕ್ಕೆಜೋಳ (ಕತ್ತಲಗೆರೆ) ಬೆಳೆಗಳ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ.
ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ 5431 ಕ್ವಿಂಟಾಲ್ ನಷ್ಟು ಏಕದಳ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳ ಬೀಜೋತ್ಪಾದನೆ ಹಾಗೂ 4.25 ಗುಣಮಟ್ಟದ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಉತ್ಪಾದನೆ ಮಾಡಿರುತ್ತದೆ. ಓಎಫ್‍ಆರ್‍ಸಿಯು 24 ಸಾವಿರ ಕೆ.ಜಿ.ಯ 8 ಬಗೆಯ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಏಜೆಂಟ್‍ಗಳನ್ನು ಉತ್ಪಾದಿಸಿ, ರೂ.24 ಲಕ್ಷಗಳ ಆದಾಯ ಹಾಗೂ ಸುಮಾರು 1300 ಕೆ.ಜಿ.ಯಷ್ಟು ಜೇನು ತುಪ್ಪವನ್ನು ಉತ್ಪಾದಿಸಿ, 4 ಲಕ್ಷ ಆದಾಯ ಗಳಿಸಿರುತ್ತದೆ. ಹಾಗೂ ವಿಶ್ವವಿದ್ಯಾಲಯವು ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಸಂಸ್ಥೆಗಳ 66 ಹೊಸ ಉತ್ಪನ್ನಗಳನ್ನು ಪರೀಕ್ಷೆ ಮಾಡಿ ಸುಮಾರು ರೂ. 122.23 ಲಕ್ಷಗಳ ಆದಾಯ ಗಳಿಸಿರುತ್ತದೆ.


ಪ್ರಸ್ತುತ ಅವಧಿಯಲ್ಲಿ 5 ವಿಸ್ತರಣಾ ಸಿಬ್ಬಂದಿಗೆ ತರಬೇತಿ, 21 ಪ್ರಾಯೋಜಿತ ತರಬೇತಿ ಕಾರ್ಯಕ್ರಮ, 19 ವೃತ್ತಿ ತರಬೇತಿ ಕಾರ್ಯಕ್ರಮ ಹಾಗೂ 18 ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳು ಸೇರಿ ಒಟ್ಟು 2270 ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ. 5 ಸಾವಿರ, ಮಣ್ಣು ಮಾದರಿ ಹಾಗೂ 1700 ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.
2022-23 ನೇ ಸಾಲಿನಲ್ಲಿ ವಿಶ್ವವಿದ್ಯಾಲದಲ್ಲಿನ ಬೋಧಕ ಮತ್ತು ಬೋಧಕೇತರ ವರ್ಗದಲ್ಲಿ ಮುಂಬಡ್ತಿ ನೀಡಲಾಗಿದೆ. ಹಾಗೂ ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾಲಯದಲ್ಲಿ 101 ಸಹಾಯಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಣ ಸಂಶೋಧನೆ, ವಿಸ್ತರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ.ಅಲ್ಲದೆ, ಒಟ್ಟು 04 ಜನರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ವಿವಿ 8ನೇ ಘಟಿಕೋತ್ಸವ ಸಮಾರಂಭದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್‍ಗಳು ಮತ್ತು ನಿರ್ದೇಶಕರು, ವಿಶ್ರಾಂತ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಆಹ್ವಾನಿತ ಗಣ್ಯರು, ಗೌರವಾನ್ವಿತ ಪದಕ ದಾನಿಗಳು, ವಿದ್ಯಾರ್ಥಿಗಳು ಅವರ ತಂದೆ, ತಾಯಿ ಶೋಷಕರು ಭಾಗವಹಿಸಲಿದ್ದಾರೆ ಎಂದರು.


ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ ಡಾ.ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ, ಸಂಶೋಧನಾ ನಿರ್ದೇಶಕ ಹೇಮ್ಲಾನಾಯ್ಕ್, ಸ್ನಾತಕೋತ್ತರ ಡೀನ್ ದಿನೇಶ್ ಕುಮಾರ್, ಬೀಜ ಅಧಿಕಾರಿ ಎಸ್.ವಿ ಪಾಟಿಲ್ ಹಾಜರಿದ್ದರು.

Leave A Reply

Your email address will not be published.

error: Content is protected !!