ಡೆಂಗ್ಯೂ ಜ್ವರ ; ನವ ವಿವಾಹಿತೆ ಬಲಿ !
ರಿಪ್ಪನ್ಪೇಟೆ : ಡೆಂಗ್ಯೂ ಜ್ವರದಿಂದ ನವವಿವಾಹಿತೆ ಬಲಿಯಾದ ಘಟನೆ ಪಟ್ಟಣದ ಶಬರೀಶ ನಗರದಲ್ಲಿ ಇಂದು ನಡೆದಿದೆ.
ಮಧುರ (31) ಮೃತಪಟ್ಟ ಮಹಿಳೆ. ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆ ಸಾಗರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಾಳಗುಪ್ಪದ ತಾಯಿ ಮನೆಗೆ ವಾಪಾಸ್ ಆಗಿದ್ದರು. ಸಂಜೆ ವೇಳೆ ಮತ್ತೆ ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ವೈದ್ಯರ ಸಲಹೆಯಂತೆ ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈಕೆ ಕಳೆದ 6 ತಿಂಗಳ ಹಿಂದಷ್ಟೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದರು. ಇದೀಗ ಶಬರೀಶ ನಗರದಲ್ಲಿ ನೀರವಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಂದು ಮಧ್ಯಾಹ್ನ ರಿಪ್ಪನ್ಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.