ಬೈಕ್ನಲ್ಲಿ ಬಂದ ಇಬ್ಬರು ಮಾಂಗಲ್ಯ ಸರ ಕಿತ್ತು ಪರಾರಿ !
ಸಾಗರ : ಬೈಕ್ನಲ್ಲಿ ಬಂದ ಇಬ್ಬರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಇಲ್ಲಿನ ವಿನೋಬಾ ನಗರದಲ್ಲಿ ನಡೆದಿದೆ.
ವಿಜಯಮ್ಮ (65) ಎಂಬುವವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ವಿಜಯಮ್ಮ ಅವರು ಅಂಗಡಿಗೆ ಹೋಗಿ ಮನೆಗೆ ಹಿಂದಿರುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳಿದ್ದಾರೆ. ವಿಜಯಮ್ಮ ಅವರು ವಿಳಾಸ ಹೇಳುತ್ತಿದ್ದಾಗ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ್ದಾನೆ.
ವಿಜಯಮ್ಮ ಅವರು ತಮ್ಮ ಶಕ್ತಿಯನ್ನು ಉಪಯೋಗಿಸಿ ಮಾಂಗಲ್ಯ ಸರ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದಾಗ ಅವರ ಕುತ್ತಿಗೆ ಮತ್ತು ಕೆನ್ನೆ ಭಾಗಕ್ಕೆ ಗಾಯವಾಗಿದೆ. ಕಳ್ಳರು ಕೊನೆಗೂ ಸುಮಾರು 8 ಗ್ರಾಂ ಇರಬಹುದಾದ ಮಾಂಗಲ್ಯ ಸರದ ಒಂದು ತುಂಡು ಹರಿದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಮ್ಮ ಅವರ ಹೋರಾಟದ ಫಲವಾಗಿ 40 ಗ್ರಾಂ ಮಾಂಗಲ್ಯ ಸರ ಉಳಿದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.