ಶಾಸಕ ಬಿ.ವೈ.ವಿಜಯೇಂದ್ರ ಅವರೇ ಬಿಜೆಪಿಗೆ ಕಂಟಕವಾಗಲಿದ್ದಾರೆ ; ವೈ.ಬಿ. ಚಂದ್ರಕಾಂತ್

0 49

ಶಿವಮೊಗ್ಗ: ರಾಜ್ಯದ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರ ಆಯ್ಕೆಯಾದ ಸಂದರ್ಭದಿಂದಲೆ ಶಾಸಕ ಬಿ.ವೈ.ವಿಜಯೇಂದ್ರ ಅವರೇ ಭಾರತೀಯ ಜನತಾ ಪಕ್ಷಕ್ಕೆ ಕಂಟಕವಾಗಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಬಿ.ಜೆ.ಪಿ.ಗೆ ತಿರುಗೇಟು ನೀಡಿದ್ದಾರೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಜನ ವಿರೋಧಿ ಅಲೆ ಎದ್ದಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಸಿ.ಟಿ.ರವಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯು ಬಾಲಿಶತನದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.


ದೇಶದ ಜನರಿಂದ ಸಂಗ್ರಹಿಸಲಾದ ತೆರಿಗೆ ಹಣವನ್ನು ಜನಪರ ಯೋಜನೆಗಳಿಗೆ ಬಳಸದೆ, ಜನರ ಸಂಕಷ್ಟದ ಕಾಲಕ್ಕೆ ಧಾವಿಸದೆ. ಜನರನ್ನು ಕಷ್ಟಕ್ಕೆ ನೂಕುವುದಕ್ಕೆ ಕಾಂಗ್ರೆಸ್ ಪಕ್ಷವು, ಭಾರತೀಯ ಜನತಾ ಪಕ್ಷವಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಂದ ಸಂಗ್ರಹಿಸಿದ ಹಣವನ್ನು ಹಲವು ಜನಪರ ಯೋಜನೆಗಳ ಜಾರಿಗೆ ತರುವ ಮೂಲಕ ರಾಜ ನೀತಿಯನ್ನು ಪಾಲನೆ ಮಾಡುತ್ತಿದೆ. ಈ ರೀತಿ ಜನಪರವಾದ ಯೋಜನೆಗಳ ತಂದಿದ್ದೆ ತಪ್ಪು ಎನ್ನುವ ರೀತಿಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿಕೆ ನೀಡಿ ವಿರೋಧ ವ್ಯಕ್ತಪಡಿಸಿರುವುದಕ್ಕೆ ರಾಜ್ಯದ ಜನರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎದುರೇಟು ನೀಡಿದ್ದಾರೆ.


ದೇಶದ ಪ್ರಧಾನಿಯೊಬ್ಬರನ್ನು ಕರೆತಂದು ಹೋಬಳಿ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರೂ ರಾಜ್ಯದ ಪ್ರಜ್ಞಾವಂತ ಜನರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಿ ಮನೆಗೆ ಕಳುಹಿಸಿದ್ದರೂ, ಬಿ.ಜೆ.ಪಿ. ನಾಯಕರು ಬುದ್ಧಿ ಕಲಿಯದೆ ಜನಪರ ಯೋಜನೆಗಳ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವ ಮೂಲಕ ರಾಜ್ಯದ ಜನರನ್ನು ಅವಮಾನಿಸಿರುವುದು ಅವರ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!