ಸಮಾಧಾನ ಸಂತೃಪ್ತಿ ಇಲ್ಲದಾಗಿದೆ ; ಶ್ರೀ ರಂಭಾಪುರಿ ಶ್ರೀಗಳು
ಶಿವಮೊಗ್ಗ : ಮನುಷ್ಯ ಎಷ್ಟೇ ಭೌತಿಕ ಸಂಪತ್ತು ಗಳಿಸಿದರೂ ಇಂದು ಮಾನಸಿಕ ಶಾಂತಿ ಸಮಾಧಾನ ಸಂತೃಪ್ತಿ ಇಲ್ಲದಾಗಿದೆ. ಧರ್ಮಾಚರಣೆಯಿಂದ ಮನುಷ್ಯನಿಗೆ ಶಾಂತಿ ಸಮಾಧಾನ ಸಿಗಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (Rambhapuri) ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಸೋಮಿನಕೊಪ್ಪದಲ್ಲಿ ನಡೆಸಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಇಷ್ಟಲಿಂಗ ಪೂಜೆಯಿಂದ ಇಷ್ಟಾರ್ಥಗಳು ನೆರವೇರಿ ಅನಿಷ್ಟಗಳು ಪರಿಹಾರವಾಗುತ್ತವೆ ಎಂದಿದ್ದಾರೆ. ವೀರಶೈವರಾದವರು ಪ್ರತಿದಿನ ಇಷ್ಟಲಿಂಗ ಪೂಜಿಸುವುದರಿಂದ ಶಾಂತಿ ಸಮಾಧಾನ ದೊರೆಯುವುದಲ್ಲದೇ ಕ್ರಿಯಾಶೀಲರಾಗಿ ಬಾಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉನ್ನತಿ ಕಾಣಲು ನಿರಂತರ ಪ್ರಯತ್ನ ಮತ್ತು ಸಾಧನೆ ಬೇಕು. ಆದರ್ಶ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಜಂಗಮರಿಗೆ-ಗುರುವಿಗೆ ಇದೆ. ಗುರುವು ಪರಶಿವನ ಸಾಕಾರ ರೂಪಿಯಾಗಿದ್ದಾನೆ ಎಂದರು.
ಸಮಾರಂಭದಲ್ಲಿ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಳಲಿ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತ ನೀಡಿದರು.
ಸುಧಾ-ಜಯದೇವಪ್ಪ ಗುಡಿಕೋಟೆ, ತಿಪಟೂರು ಕೆ.ಶಿವಶಂಕರಯ್ಯ, ಗೌರೀಶ, ಗಿರೀಶ ಜಿ.ಕೆ. ಇನ್ನಿತರರು ಇದ್ದರು. ಜಿ. ಜಯದೇವಪ್ಪ ಸ್ವಾಗತಿಸಿದರು. ಶಾಂತಾ ಆನಂದ ಭಕ್ತಿ ಗೀತೆ ಹಾಡಿದರು.