ಮದುವೆಗೆ ಮಾಡಿಸಿದ ತಾಳಿ ಸೇರಿ ಅರ್ಧ ಕೆ.ಜಿ ಯಷ್ಟು ಚಿನ್ನಾಭರಣ ಜಪ್ತಿ !
ಚಿಕ್ಕಮಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಾಹಕ್ಕೆಂದು ಮಾಡಿಸಿದ ತಾಳಿ ಸರ ಸೇರಿದಂತೆ ಸುಮಾರು 500 ಗ್ರಾಂ ರಷ್ಟು ಚಿನ್ನಾಭರಣ ಜಪ್ತಿ ಆಗಿದ್ದು, ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಬಗ್ಗೆ ಇನ್ನೂ ತಲೆ ಕೆಡಿಸಿಕೊಳ್ಳದಿರುವುದು ಜನರಲ್ಲಿ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ.
ದೇಶದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ ಆರು ದಿನಗಳು ಕಳೆದಿವೆ. ಆದರೆ ರಾಜಕಾರಣಿಗಳಿಗೆ ಇದರ ಬಿಸಿ ತಟ್ಟಿದೆ ಹೊರತು ಜನರು ಈ ಬಗ್ಗೆ ತಲೆ ಕೆಡಿಸಕೊಂಡಿಲ್ಲ. ನೀತಿ ಸಂಹಿತೆ ಜಾರಿಯಾಗಿದೆ ಎಂದು ಆಡಳಿತ ಶಾಹಿ ಬೊಬ್ಬೆ ಬಡಿದುಕೊಂಡರು ಜನರು ಏಕೋ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲೆಯ ಗಡಿ ಭಾಗದಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಸೀಜ್ ಮಾಡಲಾಗುತ್ತಿರುವ ಹಣ ಚಿನ್ನ ಸೀರೆ ಕಾಟಾಚಾರಕ್ಕೆ ಎಂಬಂತಾಗಿದೆ. ಮಗಳ ಮದುವೆಗೆಂದು ಅರ್ಧ ಕೆ.ಜಿ ಚಿನ್ನಾಭರಣ ಬೆಂಗಳೂರುನಲ್ಲಿ ಮಾಡಿಸಿ ಸರ್ಕಾರಿ ಬಸ್ ನಲ್ಲಿ ಕಳಿಸಿದ ತಪ್ಪಿಗೆ ಪೋಲಿಸರು ಜಪ್ತಿ ಮಾಡಿರುವ ಘಟನೆ ವರದಿಯಾಗಿದೆ.
ನಗರದ ಹೊರವಲಯದನಲ್ಲಿನ ಮಾಗಡಿ ಚೆಕ್ ಪೋಸ್ಟ್ ನಲ್ಲಿ ಬೆಂಗಳೂರಿಂದ ಕಡೂರಿಗೆ ಬರುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ ತಡೆದು ತಪಾಸಣೆ ನಡೆಸಿದ ವೇಳೆ ಅರ್ಧ ಕೆ.ಜಿ ತೂಕದ ಚಿನ್ನಾಭರಣ ಸಿಕ್ಕಿಬಿದ್ದಿದೆ. ಕಡೂರಿನ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಗೆ ಮಾಡಿಸಿದ ಚಿನ್ನ ಬೆಂಗಳೂರಿಂದ ಬಸ್ ಕಂಡಕ್ಟರ್ ಕೈಗೆ ಕೊಟ್ಟು ಇದೀಗ ಪೇಚಿಗೆ ಸಿಲುಕುವಂತಾಗಿದೆ.
ಬರೋಬ್ಬರಿ 13 ಲಕ್ಷದ 20 ಸಾವಿರ ಮೌಲ್ಯದ ನೆಕ್ಲೆಸ್, ತಾಳಿ ಸೇರಿದಂತೆ ಚಿನ್ನ ಆಭರಣವನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಬಸ್ ಚಾಲಕ ಪ್ರಕಾಶ ನಿರ್ವಾಹಕ ರಾಜೇಂದ್ರರವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.