ಸಾಗರ : ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಸಾಗರ ವಿಧಾನಸಭಾ ಕ್ಷೇತ್ರದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಸಾಗರ ಹಾಗೂ ಹೊಸನಗರ ಭಾಗದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ಜೂನ್ 3 ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣಗೊಳ್ಳಲ್ಲಿದ್ದಾರೆ, ಹೊಸ ಸಚಿವ ಸಂಪುಟದಲ್ಲಿ ಮಲೆನಾಡು ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ವಿಶೇಷವಾಗಿ ಮಲೆನಾಡಿನ ಈಡಿಗ ಸಮುದಾಯದ ಕೋಟಾದಡಿ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ಬೇಳೂರು ಗೋಪಾಲಕೃಷ್ಣ ಅವರು ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿರುವ ಅನುಭವಿ ಜನಪ್ರತಿನಿಧಿ. ಸಾಗರ, ಹೊಸನಗರ ಹಾಗೂ ಮಲೆನಾಡು ಭಾಗದ ಸಮಸ್ಯೆಗಳನ್ನು ಅವರು ನಿರಂತರವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅರಣ್ಯಭೂಮಿ ಸಮಸ್ಯೆ, ರೈತರ ಸಂಕಷ್ಟ, ರಸ್ತೆ ಸಂಪರ್ಕ, ಕುಡಿಯುವ ನೀರು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ವಿಚಾರದಲ್ಲಿ ಅವರು ಸಕ್ರಿಯವಾಗಿ ಧ್ವನಿ ಎತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಮಲೆನಾಡು ಭಾಗದ ಈಡಿಗ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ನೀಡಲು ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತ ಎಂದು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಗರ-ಹೊಸನಗರ ಭಾಗವು ಭೌಗೋಳಿಕವಾಗಿ ವಿಶಾಲವಾಗಿದ್ದು, ಅರಣ್ಯ ಪ್ರದೇಶ, ಹಿನ್ನೀರು ಭಾಗ, ಮಲೆನಾಡಿನ ವಿಶೇಷ ಸಮಸ್ಯೆಗಳು ಇಲ್ಲಿ ಹೆಚ್ಚಾಗಿವೆ. ಈ ಭಾಗದ ಜನರ ಸಮಸ್ಯೆಗಳನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡಿರುವ ಸ್ಥಳೀಯ ನಾಯಕನಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನದ ಜೊತೆಗೆ ಸಮುದಾಯ ಪ್ರಾತಿನಿಧ್ಯಕ್ಕೂ ಮಹತ್ವ ನೀಡಬೇಕು. ಮೂರು ಬಾರಿ ಶಾಸಕರಾಗಿರುವ ಅನುಭವ, ಕ್ಷೇತ್ರದ ಮೇಲಿನ ಹಿಡಿತ ಹಾಗೂ ಮಲೆನಾಡು ಈಡಿಗ ಸಮುದಾಯದ ಪ್ರತಿನಿಧಿತ್ವದ ಆಧಾರದ ಮೇಲೆ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಭಿಮಾನಿಗಳಾದ ಕಡೆಕಲ್ ನಾಗರಾಜ್, ಎರಗಿ ಉಮೇಶ್, ಡಿ ಎಂ ಸದಾಶಿವ, ನವೀನ್ ಗದ್ದೆಮನೆ, ಸಚಿನ್ ಗದ್ದೆಮನೆ, ಗೋಪಾಲ್ ಹೀಲಗೊಡು, ಸಾಕಮ್ಮ, ಮಾಲತೇಶ್ ಸೇರಿದಂತೆ ಸಾಗರ ಮತ್ತು ಹೊಸನಗರ ಭಾಗದ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.

