ಪತ್ರಿಕಾ ಏಜೆಂಟರನ್ನು ಕೇವಲವಾಗಿ ಕಾಣಬೇಡಿ ; ರಮೇಶ್ ಎನ್

0 40


ಸಾಗರ : ಪತ್ರಿಕಾ ಏಜೆಂಟರಿಗೆ ಓದುಗರೇ ಅನ್ನದಾತರು. ಆದರೆ ಕೆಲವರು ಏಜೆಂಟರನ್ನು ಕೇವಲವಾಗಿ ನೋಡುವ ಪ್ರವೃತ್ತಿಯನ್ನು ಬಿಡಬೇಕು ಎಂದು ಇಲ್ಲಿನ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್. ಹೇಳಿದರು.


ಪಟ್ಟಣದ ವಿಜಯನಗರ ಬಡಾವಣೆಯಲ್ಲಿನ ಶ್ರೀಧರ ಸಭಾಂಗಣದಲ್ಲಿ ಜೋಶಿ ಫೌಂಡೇಷನ್ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಪತ್ರಿಕಾ ವಿತರಕರಾದ ವಿನಯ್ ಮತ್ತು ಕಿರಣ್ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೆಲವರು ಏಜೆಂಟರನ್ನು ಭಿಕ್ಷುಕರಂತೆ ಕಾಣುತ್ತಾರೆ. ಇದು ನನ್ನ ಅನುಭವಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಗಣೇಶ ಎಂಬ ಪೇಪರ್ ಹಂಚುವ ಹುಡುಗ ಅಪಘಾತದಲ್ಲಿ ಮೃತನಾದ ನಂತರ ಹುಡುಗರೇ ಪೇಪರ್ ಹಂಚಲು ಬರುತ್ತಿಲ್ಲ. ಅವನ ಕುಟುಂಬಕ್ಕೆ ವಯಕ್ತಿಕವಾಗಿ ಆರ್ಥಿಕ ನೆರವು ನೀಡಬೇಕಾಯಿತು. ಇಂಥ ಸಂದಭದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಈ ಘಟನೆ ನಂತರ ಯಾರೂ ಪೇಪರ್ ವಿತರಣೆಗೆ ಬರುತ್ತಿಲ್ಲ. ಬಂದರೂ ಹೆಚ್ಚು ದಿನ ಇರುವುದಿಲ್ಲ. ನಾವು ಠೇವಣಿ ಇಟ್ಟು ಕಮಿಷನ್ ಮೇಲೆ ವ್ಯವಹಾರ ಮಾಡುತ್ತೇವೆ. ಹಂಚುವ ಹುಡುಗರಿಗೆ ಹೆಚ್ಚು ಸಂಬಳ ಕೊಡುತ್ತಿದ್ದೇನೆ. ಪೇಪರ್ ಮಾರಾಟಕ್ಕೆ ಒಂದಿಷ್ಟು ಒತ್ತಡ ಬೇರೆ. ಒಟ್ಟಾರೆ ಈಗ ಕೆಲಸ ವಿತರಣಾ ಕೆಲಸ ಕಷ್ಟಕರವಾಗಿದೆ. ಆದರೂ ಪತ್ರಿಕೆ ಮುದ್ರಣವಾದರೆ ಅದು ಓದುಗರ ಕೈ ತಲುಪಲು ವಿತರಕರು ಅನಿವಾರ್ಯ. ಕಷ್ಟದಲ್ಲಿಯೂ ಈ ಕೆಲಸ ನಿರ್ವಹಿಸುತ್ತ ಬಂದಿರುವುದು ನನಗೆ ಬದುಕು ಕೊಟ್ಟಿದೆ ಹಾಗೂ ಸಾರ್ವಜನಿಕವಾಗಿ ಗುರುತಿಸುವಂತೆ ಮಾಡಿರುವುದು ಹೆಮ್ಮೆ ತಂದಿದೆ. ಕಷ್ಟದಲ್ಲೂ ಸುಖ ಕಂಡಿದ್ದೇನೆ ಎಂದರು.


ನಂ ಸಮಾಚಾರ ಪತ್ರಿಕೆಯ ಮ.ಸ.ನಂಜುಮಡಸ್ವಾಮಿ ಮಾತನಾಡಿ, ನಾನು ಕೂಡ ಬಡತನದಲ್ಲಿ ಶಿವಮೊಗ್ಗದಲ್ಲಿ ಪ್ರಜಾವಾಣಿ, ಕನ್ನಡ ಪ್ರಭ, ವಿಕ್ರಮ, ಉದಯವಾಣಿ ಮುಂತಾದ ಪತ್ರಿಕೆಗಳನ್ನು ಹಂಚುತ್ತಿದ್ದೆ. ನಾವು ಪತ್ರಿಕೆ ಹಂಚುವಾಗ ಏಜೆಂಟರಲ್ಲಿ ಠೇವಣಿ ಇಡಬೇಕಿತ್ತು. ಬೆಳಗಿನ ಜಾವ 4 ಗಂಟೆಗೆ ಎದ್ದು ಏಜೆಂಟರ ಬಳಿ ಹೆಸರು ಬರೆಸಿ ಪೇಪರ್ ಹಂಚಿ ಕಾಲೇಜಿಗೆ ಹೋಗುತ್ತಿದ್ದೆ. ಒಮ್ಮೊಮ್ಮೆ ಕಾಲೇಜಿಗೆ ಹೋಗುವಾಗ ಎರಡು ಗಂಟೆ ವಿಳಂಬವಾಗುತ್ತಿತ್ತು. ಇನ್ನೊಂದು ಸಮಸ್ಯೆ ಎಂದರೆ, ಪೇಪರ್ ಬಿಲ್ ವಸೂಲಿ. ಮನೆಯಲ್ಲಿ ಗಂಡಸರಿಲ್ಲ, ನಾಳೆ ಬಾ ಎಂದು ಹೇಳುವುದು ಮಾಮೂಲಿಯಾಗಿತ್ತು. ಈಗ ಹಣ ಪಾವತಿಸಲು ಬೇರೆ ಬೇರೆ ವಿಧಾನಗಳಿವೆ. ನಾನು ಹಲವಾರು ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದು, ಒಂದು ವರ್ಷದ ಹಣವನ್ನು ಮುಂಗಡವಾಗಿ ನೀಡುವ ರೂಢಿ ಬೆಳೆಸಿಕೊಂಡಿದ್ದೇನೆ ಎಂದರು.


ಪತ್ರಿಕಾ ವಿತರಕರಾದ ವಿನಯ್ ಮತ್ತು ಕಿರಣ್ ಅವರನ್ನು ಸಂಘಟನೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಶಿರಳಗಿ ಮಾತನಾಡಿ, ನಾನು 80 ರ ದಶಕದಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಕೊಂಡಿದ್ದು, ಆಗ ಜಿಲ್ಲಾ ಆವೃತ್ತಿಗಳು ಇರಲಿಲ್ಲ. ಎಲ್ಲ ದಿನಪತ್ರಿಕೆಗಳೂ ಬೆಂಗಳೂರಿನಿಂದ ಬರುತ್ತಿದ್ದವು. ಆಗ ಸಾಗರದಲ್ಲಿ ಪೇಪರ್ ಬಾಬುರಾವ್ ಅವರಲ್ಲಿ ನಾನು ಪತ್ರಿಕೆ ವಿತರಣೆ ಕೆಲಸ ಮಾಡುತ್ತಿದ್ದು, ಬೆಳಗಿನಿಂದ ಸಂಜೆ ವರೆಗೂ ಬರುತ್ತಿದ್ದ ಬೇರೆ ಬೇರೆ ಪತ್ರಿಕೆಗಳನ್ನು ಹಂಚಬೇಕಿತ್ತು. ಪಿಯುಸಿಯಿಂದ ಪದವಿವರೆಗೂ ಪೇಪರ್ ಹಂಚಿ ಅದರ ಆದಾಯದಿಂದ ಶಿಕ್ಷಣ ಪಡೆದುಕೊಂಡೆ. ನನ್ನ ವಿದ್ಯಾಭ್ಯಾಸಕ್ಕೆ ಪತ್ರಿಕಾ ವಿತರಣೆಯ ಕೆಲಸ ನೆರವಾಯಿತು ಎಂದರು.


ಪತ್ರಿಕಾ ವಿತರಣೆಯಿಂದ ಒಂದಿಷ್ಟು ಆರ್ಥಿಕ ನೆರವು ಸಿಗುವುದು ಒಂದಾದರೆ, ಈ ಕೆಲಸಕ್ಕಾಗಿ ಬೆಳಗಿನ ನಸುಕಿನಲ್ಲೇ ಏಳುವುದು, ಮಳೆ ಚಳಿ ಎನ್ನದೇ ಮನೆ ಮನೆಗೆ ಪೇಪರ್ ಹಾಕುವುದು ಹಸಿವಿನ ದಾರಿಯಲ್ಲಿ ಅನಿವಾರ್ಯ. 25 ವರ್ಷಗಳ ಕಾಲ `ಹಾಯ್ ಬೆಂಗಳೂರ್ ಏಜೆಂಟ್ ಆಗಿ ಕೆಲಸ ಮಾಡಿರುವುದು ಮರೆಯಲಾರದ ಅನುಭವ. ಡೆಲ್ಲಿ ಪ್ರಕಾಶನದ ಪತ್ರಿಕೆಗಳ ವಿತರಣೆಯನ್ನೂ ಇವತ್ತೂ ಮಾಡುತ್ತಿರುವೆ. ಪತ್ರಿಕಾ ವಿತರಣೆ ಕೆಲಸದಿಂದ ನನ್ನ ಬದುಕಿಗೆ ಒಂದಿಷ್ಟು ಆರ್ಥಿಕ ನೆರವು ಸಿಕ್ಕಿದೆ ಹಾಗೂ ಓದುಗರ ಪ್ರೀತಿ ದೊರಕಿದೆ ಎಂದರು.


ಬ್ಯಾಂಕ್ ಉದ್ಯೋಗಿ ಪ್ರಸನ್ನ ಮಾತನಾಡಿ, ನಮ್ಮ ತಂದೆಯವರು ತಾಳಗುಪ್ಪದಲ್ಲಿ 1980 ರಲ್ಲಿ ಪೇಪರ್ ಏಜೆಂಟಾಗಿದ್ದರಿಂದ ನಾನು ಮೂರನೇ ತರಗತಿಯಿಂದಲೇ ಪೇಪರ್ ಹಂಚುತ್ತಿದ್ದೆ. ನನ್ನ ವಿದ್ಯಾಭ್ಯಾಸಕ್ಕೆ ತಳಹದಿಯೇ ಈ ಪತ್ರಿಕಾ ವಿತರಣೆ ಕೆಲಸದ ಆದಾಯ. ಬೆಳಿಗ್ಗೆ ವಿತರಣೆ ಕೆಲಸವಾದರೆ ಸಂಜೆ ವಸೂಲಿ ಕೆಲಸ. ಒಟ್ಟಾರೆ ನನ್ನ ಭವಿಷ್ಯದ ಬದುಕನ್ನು ರೂಪಿಸಿದ್ದೇ ಪತ್ರಿಕೆ ವಿತರಣೆ ಕೆಲಸ ಎಂದರು.


ಈ ಸಂದರ್ಭದಲ್ಲಿ ಶಂಕರ್ ಶರ್ಮಾಜಿ, ಮುರಳೀಧರ ಹತ್ವಾರ್, ಬದರೀನಾಥ್, ಶ್ರೀಪತಿ, ರಾಘವೇಂದ್ರ, ವಸಂತ, ತಿಮ್ಮಪ್ಪ, ಜ್ಯೋತಿ ಎಂ.ಕೆ., ಅನುಷಾ ಮತ್ತಿತರರು ಹಾಜರಿದ್ದರು.


ರಾಜೇಂದ್ರ ಪೈ ಸ್ವಾಗತಿಸಿದರು. ಎಲ್.ಎಂ.ಹೆಗಡೆ ವಂದಿಸಿದರು. ವೈ.ಮೋಹನ್ ನಿರೂಪಿಸಿದರು.

Leave A Reply

Your email address will not be published.

error: Content is protected !!