ಅಡಿಕೆ, ರಬ್ಬರ್ ಕಳ್ಳರ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು

0 1,534

ರಿಪ್ಪನ್‌ಪೇಟೆ : ಮನೆಯಲ್ಲಿ ಒಣಗಿಸಿ ಇಡುತ್ತಿದ್ದ ಅಡಿಕೆ (Arecanut) ಮತ್ತು ರಬ್ಬರ್ (Rubber) ಕಳ್ಳತನ (Theft) ಮಾಡುತ್ತಿದ್ದವರ ಹೆಡೆಮುರಿ ಕಟ್ಟುವಲ್ಲಿ ರಿಪ್ಪನ್‌ಪೇಟೆ (Ripponpet) ಪೊಲೀಸರು (Police) ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಂದೂರು ಗ್ರಾಮದ ವೀರೇಶ್ ಎಂಬುವವರ ಮನೆಯಲ್ಲಿ ಒಣಗಿಸಿದ್ದ 105 ರಬ್ಬರ್ ಶೀಟ್ ಹಾಗೂ ಕ್ವಾಡ್ರಿಗಿ ಗ್ರಾಮದ ಬಾಲರಾಜ್ ಎಂಬುವವರ ಮನೆಯಲ್ಲಿ ಒಣಗಿಸಿಟ್ಟಿದ್ದ 1 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಅಡಿಕೆ ಕಳ್ಳತನವಾಗಿತ್ತು ಹಾಗೂ ಇನ್ನಿತರ ಕಡೆಗಳಲ್ಲಿ ರಬ್ಬರ್ ಶೀಟ್ ಗಳ ಕಳ್ಳತನವಾಗಿತ್ತು. ಈ ಹಿನ್ನಲೆಯಲ್ಲಿ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಲೆನಾಡು ಪ್ರದೇಶದಲ್ಲಿ ಕಂಟಕಪ್ರಾಯವಾಗಿ ಇಂತಹ ಕಳ್ಳತನ ಪ್ರಕರಣವನ್ನು ಕೈಗೆತ್ತಿಕೊಂಡ ಪಿಎಸ್‌ಐ ಪ್ರವೀಣ್ ಎಸ್‌.ಪಿ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳರ ಜಾಲವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಮಾಲು ಹಾಗೂ ವಾಹನ ಸಮೇತ ಬಂಧಿಸಿದ್ದು, ಹರತಾಳು ಗ್ರಾಮದ ರಾಘವೇಂದ್ರ ಅಲಿಯಾಸ್ ರಾಘು ಮತ್ತು ನಂಜವಳ್ಳಿ ಗ್ರಾಮದ ಶ್ರೀಧರ್ ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳಾದ ಶಿವಪುರ ಗ್ರಾಮದ ಪ್ರವೀಣ್, ಗಂದ್ರಳ್ಳಿ ನಾಗಭೂಷಣ್ ಅಲಿಯಾಸ್ ನಾಗ ಮತ್ತು ವಡಗೆರೆಯ ಪ್ರತಾಪ್ ಪರಾರಿಯಾಗಿದ್ದು ಇವರ ಬಂಧನಕ್ಕೂ ಪೊಲೀಸರು ಬಲೆಬೀಸಿದ್ದಾರೆ.

ಬಂಧಿತರಿಂದ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಹಾಗೂ 50 ಸಾವಿರ ರೂ.ಗಳಿಗೂ ಅಧಿಕ ಮೌಲ್ಯದ ರಬ್ಬರ್ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್, ಉಮೇಶ್, ಸಂತೋಷ್ ಕೊರವರ, ಮಧುಸೂಧನ್, ರಾಮಚಂದ್ರ ಮಂಜುನಾಥ್, ಪ್ರೇಮ್ ಕುಮಾರ್ ಹಾಗೂ ಶಿವಮೊಗ್ಗ ಎ.ಎನ್.ಸಿ ತಂಡದ ಇಂದ್ರೇಶ್, ಗುರುರಾಜ್ ಮತ್ತು ವಿಜಯ್ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!