ಚಲಿಸುತ್ತಿದ್ದ ಬಸ್ನಿಂದ ಮಗುವಿನೊಂದಿಗೆ ಬಿದ್ದ ವ್ಯಕ್ತಿ ಸ್ಥಿತಿ ಮತ್ತಷ್ಟು ಗಂಭೀರ
ರಿಪ್ಪನ್ಪೇಟೆ : ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಮಗುವಿನೊಂದಿಗೆ ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕೋಡೂರು ಸಮೀಪದ ಶಾಂತಪುರದಲ್ಲಿ ಮಂಗಳವಾರ ಸಂಜೆ 4:30 ರ ಸುಮಾರಿಗೆ ನಡೆದಿತ್ತು.
ಚಿಕ್ಕಜೇನಿ ನಿವಾಸಿ ಕುಮಾರ್ ಆರ್ (60) ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಖಾಸಗಿ ಬಸ್ಗೆ ಕೀಳಂಬಿ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಸ್ ಏರಿದ್ದ ಈತ ಕೇವಲ 200 ಮೀ. ದೂರ ಸಾಗುವಷ್ಟರಲ್ಲಿ ಬಸ್ನಿಂದ ಕೆಳಗೆ ಬಿದಿದ್ದರು, ಈ ವೇಳೆ ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿತ್ತು.
ಬಸ್ನಲ್ಲಿ ಅಧಿಕ ಜನ ತುಂಬಿದ್ದು ತಿರುವಿನಲ್ಲಿ ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಈ ಘಟನೆ ನಡೆದಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಗಾಯಾಳು ವ್ಯಕ್ತಿಗೆ ಕೂಡಲೇ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ನಂತರ ಇನ್ನೂ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ ಕುಮಾರ್ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ‘ಮಲ್ನಾಡ್ ಟೈಮ್ಸ್‘ಗೆ ಬಲ್ಲ ಮೂಲಗಳು ತಿಳಿಸಿವೆ.
ಈ ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.