ಬೈಪಾಸ್ ರಸ್ತೆ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕ ; ಸಂಸದ ಬಿವೈಆರ್ ವಿರುದ್ಧ ಗಂಭೀರ ಆರೋಪ
ಶಿಕಾರಿಪುರ : ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ನೂರಾರು ಎಕರೆಯಲ್ಲಿ ಸಾವಿರಾರು ರೈತರು ತಮ್ಮ ಕೃಷಿ ಭೂಮಿಯಲ್ಲಿ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗಳನ್ನು ಮಾಡಿಕೊಂಡಿದ್ದು, ಬೆಳೆಗಾರರ ಫಸಲು ಬರುತ್ತಿರುವ ಸಂದರ್ಭದಲ್ಲಿಯೇ ಅಡಿಕೆ ತೋಟಗಳನ್ನು ಗದ್ದೆಗಳನ್ನು ನಾಶಪಡಿಸಿ ಜಿಲ್ಲೆಯ ಸಂಸದರು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ರಾಷ್ಟ್ರಿಯ ಹೆದ್ದಾರಿಯ ಬೈಪಾಸ್ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕವಾಗಿದೆಯಲ್ಲದೇ ಸಣ್ಣ ಹಿಡುವಳಿ ರೈತರೂ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಾರೆ ಎಂದು ಭದ್ರಕಾಡ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಗಂಭೀರವಾಗಿ ಆರೋಪಿಸಿದರು.
ತಾಲ್ಲೂಕಿನ ಚನ್ನಳ್ಳಿ, ಗಬ್ಬೂರು, ಸದಾಶಿವಪುರು, ಹಳಿಯೂರು ನೆಲವಾಗಿಲು ಗ್ರಾಮಗಳ ನೂರಾರು ಎಕರೆ ಭೂಮಿ ಕಳೆದುಕೊಳ್ಳುವ ನೂರಾರು ರೈತರು ಬುಧವಾರ ತಾಲ್ಲೂಕು ಕಛೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ನಿರ್ಮಿಸುವುದನ್ನು ಕೂಡಲೇ ನಿಲ್ಲಿಸಬೇಕು ತಾಲ್ಲೂಕಿನಲ್ಲಿ ಅನೇಕ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, ಈ ಹಿಂದೆ ಭತ್ತವನ್ನೇ ನಂಬಿ ಜೀವನ ನಡೆಸುತ್ತಿದ್ದರು. ಈಗ ಇವರು ವಿವಿಧ ಬ್ಯಾಂಕ್ಗಳಲ್ಲಿ ಸಾಲ-ಸೋಲ ಮಾಡಿ ಅಡಿಕೆ ಬೆಳೆ ಬೆಳೆದಿದ್ದಾರೆ ಫಸಲಿಗೆ ಬಂದಿರುವ ಫಲವತ್ತಾದ ಕೃಷಿ ಭೂಮಿಗಳನ್ನು ಕಿತ್ತುಕೊಂಡರೆ ರೈತರು ಮತ್ತು ಅವರ ಕುಟುಂಬದ ಸದಸ್ಯರು ಬೀದಿಗೆ ಬೀಳುತ್ತಾರೆ. ಇದನ್ನು ತಪ್ಪಿಸಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪುನರ್ ಪರಿಶೀಲಿಸಿ ವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಿ ಎಸ್ ಈಶ್ವರಪ್ಪ ಮಾತನಾಡಿ , ತಲತಲಾಂತರದಿಂದ ವಂಶ ಪಾರಂಪರ್ಯವಾಗಿ ಉಳಿಸಿಕೊಂಡು ಬಂದಿರುವ ತಾಲ್ಲೂಕಿನ ರೈತರ ಜಮೀನುಗಳನ್ನು ರೈಲ್ವೆ ಯೋಜನೆಗಳಿಗೆ, ಹೆದ್ದಾರಿ ಕಾಮಗಾರಿಗೆ ಹೀಗೆ ವಿವಿಧ ಯೋಜನೆಗಳ ಹೆಸರಿನಲ್ಲಿ ಕಿತ್ತುಕೊಂಡರೆ ಬೇರೆ ಉದ್ಯೋಗ ತಿಳಿಯದ ರೈತರು ಬೀದಿಗೆ ಬೀಳುತ್ತಾರೆ. ರಾಣೆಬೆನ್ನೂರಿನಿಂದ ಬೈಂದೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯು ಬೈಪಾಸ್ ರಸ್ತೆ ಮೂಲಕ ಸಾಲೂರು ರಸ್ತೆ ಯಿಂದ ಶಿರಾಳಕೊಪ್ಪ ರಸ್ತೆ ಮೂಲಕ ಮಾಸೂರು ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯು ಇದಾಗಿದ್ದು, ಗಬ್ಬುರು, ಚನ್ನಳ್ಳಿ, ಸದಾಶಿವಪುರ, ನೆಲವಾಗಿಲು, ಕಾನೂರು , ಹಳಿಯೂರು, ಗ್ರಾಮಗಳ ಸಣ್ಣ ಹಿಡುವಳಿ ರೈತರ ಜಮೀನುಗಳು ಭೂಸ್ವಾಧಿನಕ್ಕೆ ಒಳಪಡುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿ, ಸಾಗರದ ಉಪವಿಭಾಗಾಧಿಕಾರಿಗೆ ತಹಶೀಲ್ದಾರ್, ಎಂಪಿ ಮತ್ತು ಎಂಎಲ್ಎ ಒಟ್ಟಿಗೆ ಸೇರಿ ಸಭೆ ಕರೆಯಲು ನಾಲ್ಕು ಬಾರಿ ಮನವಿ ಮಾಡಿದರು ಫಲ ನೀಡಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಗಳು ನಿರ್ಮಾಣವಾಗಬೇಕಾದರೆ ಮುಂದಿನ 30-40 ವರ್ಷಗಳ ಅಭಿವೃದ್ಧಿಯ ಚಿಂತನೆ ಇಟ್ಟುಕೊಂಡು ಐದು ಕಿ.ಮೀ ದೂರದಲ್ಲಿ ರಸ್ತೆ ಕಾಮಗಾರಿ ನಡೆಸಬೇಕೇ ಹೊರತು, ಈಗಿನ ಬೈಪಾಸ್ ರಸ್ತೆಯು ತಾಲ್ಲೂಕಿನ ಐದು ಕಿ.ಮೀ ಒಳಗೆ ಇದೆ. ತಾಲ್ಲೂಕಿನಲ್ಲಿ ಬಲಾಢ್ಯ ರಾಜಕಾರಣಿಗಳ ಮರ್ಜಿಗೆ ತಕ್ಕಂತೆ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಕುಣಿಯುತ್ತಿದ್ದು, ಹೈವೆಯಲ್ಲಿ ವಾಹನ ಒತ್ತಡ ಇಲ್ಲದಿದ್ದರೂ ಹೈವೇ ನಿರ್ಮಾಣ ಮಾಡಲು ಹೊರಟಿದ್ದಾರೆ. ಸಂಸದರು ಅವರ ಜಮೀನುಗಳಲ್ಲಿ ಫ್ಯಾಕ್ಟರಿ, ವಿದ್ಯಾ ಸಂಸ್ಥೆಗಳನ್ನು ಕಟ್ಟುತಿದ್ದಾರೆ. ಬಡ ರೈತರ ಜಮೀನು ಭೂಸ್ವಾಧೀನ ಮಾಡಬೇಡಿ ಎಂದು ಮನವಿ ಮಾಡಿದರೆ ಉತ್ತರ ಕೊಡುತ್ತಿಲ್ಲ ಬದಲಿಗೆ ಪೊಲೀಸ್ ಬಲ ಉಪಯೋಗಿಸಿ ರೈತನ್ನು ಒಕ್ಕಲೆಬ್ಬಿಸುತ್ತಿದ್ದಾರೆ.
ಬೈಪಾಸ್ ಯೋಜನೆಯನ್ನು ಕೈ ಬಿಡಿ ಇಲ್ಲವಾದರೆ ಜೀವ ಕೊಟ್ಟೆವು ಭೂಮಿ ಕೊಡೆವು ಎಂದ ಅವರು, ಇಂದು ಕೇವಲ ಚನ್ನಳ್ಳಿ, ಗಬ್ಬೂರು, ಸದಾಶಿವಪುರ, ನೆಲವಾಗಿಲು ರೈತರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಏಕೆಂದರೆ ಮಳೆ ಮತ್ತು ಅಂಜನಾಪುರ ಜಲಾಶಯದ ನೀರನ್ನು ನಂಬಿರುವ ರೈತರು ಮಾತ್ರ ಇಲ್ಲಿ ಭಾಗವಹಿಸಿದ್ದಾರೆ ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೂ ನಾವು ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಕೊಡುವ ಮುನ್ನ ಮಾಸೂರು ಸರ್ಕಲ್ ನಿಂದ ತಾಲ್ಲೂಕು ಕಛೇರಿ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ, ತಹಸಿಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಗುಡ್ಡಳ್ಳಿ ಪರಮೇಶಪ್ಪ, ಪಾರಿವಾಳದ ಗಣೇಶ್, ಗುಡ್ಡಳ್ಳಿ ಕೃಷ್ಣ, ಶಿವಣ್ಣ , ಗೋಪಿ ಮುರ್ಲೆರ್, ನೂರ್ ಅಹಮದ್, ಸಂದೀಪ್ ಮಟ್ಟಿಮನೆ ರೇವಣಪ್ಪ ಚಿಟ್ಟೂರು, ಜಂಬೂರ್ ರಾಜಣ್ಣ, ಅಶೋಕ್ ಜಿ, ನಗರದ ರವಿಕಿರಣ್, ಸಿರಿಯಾಣ್ಣರ್ ರೇವಣಪ್ಪ, ದುರ್ಗವರ್ ಗಿರೀಶ್, ಮಲ್ಲನಗೌಡ, ನವೀನ್, ಸಂತೋಷ್, ಮಾರುತಿ ರಾವ್ ಮುಂತಾದವರು, ಉಪಸ್ಥಿತರಿದ್ದರು.