ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ ; ಸಚಿವ ಮಧು ಬಂಗಾರಪ್ಪ
ಸೊರಬ : ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ ಎಂದು ಪ್ರಾಥಮಿಕ ಮತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿ, ಗ್ಯಾಸ್, ಬೆಲೆಯೇರಿಕೆ ಹೇಳಿಕೊಂಡೇ ನಾವು ಗೆದ್ದಿರೋದು. ಅದಕ್ಕೆ ಪರಿಹಾರಾರ್ಥವೇ ಈ ಗ್ಯಾರಂಟಿ ಕಾರ್ಡ್. ರಾಜ್ಯ ಮಟ್ಟದಲ್ಲಿ ರೆವಿನ್ಯೂ ಬರುವುದರಿಂದ ಗ್ಯಾರಂಟಿ ಯೋಜನೆ ಯಶಸ್ವಿ ಆಗುತ್ತದೆ ಎಂದರು.
ಸೊರಬ ಭಾಗದಲ್ಲಿ ಬಗರಹುಕುಂ ಬಹು ದೊಡ್ಡ ಸಮಸ್ಯೆ ಇದೆ. ಅರಣ್ಯ ಭೂಮಿಯಲ್ಲಿ ಸಾಗುವಳಿ, ಮನೆ ಕಟ್ಟಿಕೊಂಡವರ ರಕ್ಷಣೆ ಆಗಬೇಕಿದೆ. ಕೇಂದ್ರದ ಸಹಕಾರ ಪಡೆದು ಅದನ್ನು ಮಾಡುತ್ತೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದ್ಭುತ ಕೆಲಸ ಮಾಡಿದ್ರು. ಬೇರೆ ಸರ್ಕಾರ ಬಂದ ನಂತರ ಅದೆಲ್ಲ ಹಾಳಾಗಿತ್ತು. ಈಗ ಅಧಿಕಾರಿ ವರ್ಗದ ಜೊತೆ ಮಾತಾಡಿದ್ದೇವೆ. ಅರಣ್ಯ ಸಚಿವರಿಗೆ ವಿನಂತಿ ಮಾಡಿದ್ದೇವೆ. ಇಲ್ಲಿನ ಸಮಸ್ಯೆ ತ್ವರಿತವಾಗಿ ಇತ್ಯರ್ಥ ಮಾಡ್ತೇವೆ ಎಂದರು.
ಇನ್ನೂ ಏತ ನೀರಾವರಿ ಯೋಜನೆ ಉದ್ಘಾಟನೆ ಆಗಿಲ್ಲ. ಉದ್ಘಾಟನೆ ಆಗಿದ್ರೆ ಈ ಬೇಸಿಗೆಗೆ ಸಮಸ್ಯೆ ಆಗ್ತಿರಲಿಲ್ಲ. ಕೆರೆಕಟ್ಟೆಗಳು ಬತ್ತಿ ಹೋಗಿವೆ. ಸಂಜೆ ಅಧಿಕಾರಿಗಳ ಪರಿಶೀಲನಾ ಸಭೆ ಇಟ್ಟು ಕೊಂಡಿದ್ದೇನೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.