ಬಿರುಸಿನ ಗಾಳಿ-ಮಳೆಗೆ ಬಾಳೆ ಬೆಳೆ ಸಂಪೂರ್ಣ ನಾಶ
ಸೊರಬ : ಚಂದ್ರಗುತ್ತಿ ಸಮೀಪದ ಅಂಕರವಳ್ಳಿ ಗ್ರಾಮದಲ್ಲಿ ಬಿರುಸಿನ ಗಾಳಿ-ಮಳೆಗೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.
ಅಬ್ದುಲ್ ಖಾದರ್ ಎಂಬುವವರಿಗೆ ಸೇರಿದ ಗ್ರಾಮದ ಸರ್ವೆ ನಂ. 81 ರಲ್ಲಿನ ಸುಮಾರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಿರುಸಿನ ಗಾಳಿ ಮಳೆಗೆ ಧರೆಗೆ ಉರುಳಿದ್ದು, ಸುಮಾರು 5 ರಿಂದ 6 ಲಕ್ಷ ರೂ., ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ತೋಟದಲ್ಲಿ ಅಳವಡಿಸಿದ್ದ ಪೈಪ್ ಲೈನ್, ಸ್ಪ್ರಿಂಕ್ಲರ್ ಗಳು ಹಾಗೂ ಅಡಿಕೆ ಗಿಡಗಳಿಗೂ ಹಾನಿಯಾಗಿದ್ದು, ಸುಮಾರು 20ಕ್ಕೂ ಅಧಿಕ ಅಡಿಕೆ ಗಿಡಗಳು ಮುರಿದು ಬಿದ್ದಿವೆ.
ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಕೆ.ಆರ್. ದೊರೆರಾಜ್ ಹಾಗೂ ಕಂದಾಯ ಇಲಾಖೆಯ ಎಂ.ಎಸ್. ಯಶವಂತ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅಬ್ದುಲ್ ಖಾದರ್ ಅವರ ಪುತ್ರರಾದ ಎ.ಕೆ. ನಾಸೀರ್ ಹಾಗೂ ಎ.ಕೆ. ಖಾಲೀದ್, ಸಾಲ-ಸೊಲ ಮಾಡಿ ಬಾಳೆಯನ್ನು ಬೆಳೆಯಲಾಗಿತ್ತು. ಇನ್ನೊಂದು ತಿಂಗಳಿನಲ್ಲಿ ಫಸಲು ಕೈ ಸೇರುವ ನಿರೀಕ್ಷೆ ಇತ್ತು. ಆದರೆ, ಮಳೆ-ಗಾಳಿಯಿಂದ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಸುಮಾರು 6 ಲಕ್ಷ ರೂ. ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.