ಇದು ಲೋಕಸಭಾ ಚುನಾವಣಾ ಗಿಮಿಕ್ ಬಜೆಟ್
ಚಿಕ್ಕಮಗಳೂರು : ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಬಜೆಟ್ ರೂಪಿಸಲಾಗಿದ್ದು ಇದು ಅಲ್ಪಸಂಖ್ಯಾತರನ್ನು ಸೆಳೆಯುವ ಬಜೆಟ್ ಆಗಿ ಮಾತ್ರ ರೂಪುಗೊಂಡಿದೆ. ಲೋಕಸಬಾ ಚುನಾವಣಾ ದೃಷ್ಟಿಯ ಬಜೆಟ್ ಮಾತ್ರವಲ್ಲದೆ ಬಿಜೆಪಿಯ ಜನಪ್ರಿಯ ಯೋಜನೆಗಳನ್ನೂ ರದ್ದುಗೊಳಿಸಿರುವುದು ಖಂಡನಾರ್ಹ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾಧ್ಯಮ ಸಂಚಾಲಕ ಪ್ರೀತಮ್ ಹೆಬ್ಬಾರ್ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಭಾಗ್ಯಲಕ್ಷ್ಮಿ ಯೋಜನೆಗೂ ಕೊಕ್ ನೀಡಿದೆ. ಜಿಲ್ಲೆಗೊಂದು ಗೋಶಾಲೆ ತೆರೆಯುವ ಹಿಂದಿನ ಸರ್ಕಾರದ ಯೋಜನೆಯನ್ನು ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಬೈಬಿಟ್ಟಿದೆ.
ಮಲೆನಾಡಿನ ಪ್ರಮುಖ ಕೃಷಿಯಾದ ಅಡಿಕೆಯು ಹಳದಿ ಎಲೆ ರೋಗ, ಚುಕ್ಕಿ ರೋಗದಿಂದ ನಶಿಸಿಹೋಗುತ್ತಿದೆ ಆದರೂ ಈ ಬಗ್ಗೆ ಸರ್ಕಾರ ಬಜೆಟ್ ನಲ್ಲಿ ಯಾವುದೇ ಅನುದಾನ ಇಟ್ಟಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ವಿದ್ಯಾನಿಧಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕೊಕ್ ನೀಡಿದೆ.
ಅಕ್ರಮ ಒತ್ತುವರಿ ಮಾಡಿಕೊಂಡಿರುವ ರೈತರಿಗೆ ದಾಖಲೆ ಪತ್ರಗಳನ್ನು ಮಾಡಿಸಿಕೊಡುವ ಬಗ್ಗೆ ಕೂಡ ಬಜೆಟ್ನಲ್ಲಿ ಯಾವುದೇ ಒತ್ತು ಕೊಡದೆ ಇರುವುದು ಮಲೆನಾಡಿಗರಿಗೆ ಇದೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ. ಜೊತೆಗೆ ಬಿಜೆಪಿ ಸರ್ಕಾರದ ಯೋಜನೆಗಳಾದ ವಿದ್ಯಾನಿಧಿ ಯೋಜನೆ, ಎಪಿಎಂಸಿ ಕಾಯ್ದೆ ರದ್ದು. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು, ವಿವೇಕ ಶಾಲೆ ಅಭಿವೃದ್ಧಿ ಯೋಜನೆ ಮತ್ತು ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಗಳನ್ನು ಸರ್ಕಾರ ರದ್ದುಗೊಳಿಸುವ ಮುಖೇನ ದ್ವೇಷದ ರಾಜಕಾರಣ ಮಾಡುತ್ತಿದೆ. ಜೊತೆಗೆ ದಲಿತರನ್ನು ಕೂಡ ತುಳಿಯುವ ಹುನ್ನಾರ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಗ್ನಿ ವೀರ ಯೋಜನೆಗೆ ಸೇರುವ ಎಸ್.ಸಿ/ಎಸ್.ಟಿ ಯುವಕರಿಗೆ ತರಬೇತಿ ನೀಡುವ ಯೋಜನೆಗೂ ಕೊಕ್ ನೀಡಲಾಗಿದೆ. ಇದೆಲ್ಲವೂ ಕೂಡ ಲೋಕಸಭಾ ಚುನಾವಣಾ ಗಿಮಿಕ್ ಬಜೆಟ್ ಆಗಿದ್ದು ರಾಜ್ಯಕ್ಕೆ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಪ್ರೀತಮ್ ಹೆಬ್ಬಾರ್ ತಿಳಿಸಿದ್ದಾರೆ.