ಬರಿದಾಗುವ ಹಂತ ತಲುಪಿದ ಶರಾವತಿ ಒಡಲು ; ಸಿಗಂದೂರು ಲಾಂಚ್ ಸೇವೆ ಸ್ಥಗಿತಗೊಳ್ಳುವ ಆತಂಕ !
ಶಿವಮೊಗ್ಗ : ಮಲೆನಾಡು ಶಿವಮೊಗ್ಗದಲ್ಲಿ ಮಳೆಯ ಕೊರತೆ ಉಂಟಾಗಿದ್ದು ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಒಡಲು ಬರಿದಾಗುವ ಹಂತ ತಲುಪಿದ್ದು ಸಿಗಂದೂರು ಲಾಂಚ್ ಸೇವೆ ಸ್ಥಗಿತಗೊಳ್ಳುವ ಆತಂಕ ಶುರುವಾಗಿದೆ. ಜನರು ಹಾಗೂ ಲಾಂಚ್ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಸ್ಥಗಿತ ಸಾಧ್ಯತೆ ಇದೆ.
ಲಾಂಚ್ ಸ್ಥಗಿತಗೊಂಡರೆ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಯಾತ್ರಿಕರಿಗೆ ತೀವ್ರ ತೊಂದರೆ ಉಂಟಾಗಲಿದ್ದು ಲಾಂಚ್ ಸ್ಥಗಿತವಾದರೆ ಭಕ್ತರು, ಪ್ರವಾಸಿಗರು ಹೊಸನಗರ ಮಾರ್ಗವಾಗಿ ಸಿಗಂದೂರು ತಲುಪಬೇಕಿದೆ.
ಹೊಸನಗರ, ನಗರ, ಸಂಪೆಕಟ್ಟೆ-ನಿಟ್ಟೂರು ಮಾರ್ಗವಾಗಿ ಸುತ್ತು ಬಳಸಿ ದೇವಸ್ಥಾನಕ್ಕೆ ಹೋಗಬೇಕಾದ ಅನಿವಾರ್ಯತೆ ಇದ್ದು ಲಿಂಗನಮಕ್ಕಿ ಜಲಾಶಯ ಈಗಾಗಲೇ ಬಹುತೇಕ ಬರಿದಾದ ಹಿನ್ನಲೆಯಲ್ಲಿ ಶರಾವತಿ ಹಿನ್ನೀರು ಭಾಗದ ಎರಡು ಲಾಂಚ್ ಸೇವೆ ಈಗಾಗಲೇ ಸ್ಥಗಿತವಾಗಿವೆ.
ಕಳೆದ ಮೇ 26 ರಿಂದಲೇ ಸ್ಥಗಿತಗೊಂಡಿರುವ ಸಾಗರ ತಾಲೂಕಿನ ಮುಪ್ಪಾನೆ ಲಾಂಚ್ ಜೂನ್ 4 ರಿಂದ ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತಗೊಂಡಿದೆ. ಇದೀಗ ಮೂರನೇಯದಾಗಿ ಹೊಳೆಬಾಗಿಲಿನ ಲಾಂಚ್ ಸಹ ಸ್ಥಗಿತಗೊಳ್ಳುವ ಆತಂಕ ಶುರುವಾಗಿದೆ.
ಹಿನ್ನೀರು ಭಾಗದಲ್ಲಿ ಲಾಂಚ್ ನಿಲ್ಲಿಸುವ ಫ್ಲಾಟ್ ಫಾರ್ಮ್ ನಿಂದ ಕೆಳಮಟ್ಟಕ್ಕೆ ನೀರು ಹೋಗಿದ್ದು ಬಳಕೆಗೆ ಬಾರದಂತೆ ಹೊಳೆಬಾಗಲು, ಅಂಬಾರಗೊಡ್ಲು ತಟದ ಪ್ಲಾಟ್ ಫಾರ್ಮ್ ಗಳು ಆಗಿವೆ. ಲಾಂಚ್ ಸ್ಥಗಿತದಿಂದ ಹಿನ್ನೀರು ಭಾಗದ ಸುಮಾರು 30 ಸಾವಿರ ಜನರಿಗೆ ಸಂಪರ್ಕ ಕಡಿತದ ಭೀತಿ ಶುರುವಾಗಿದೆ.
ಸಾಗರ ತಾಲೂಕಿನ ಸಿಗಂದೂರು, ತುಮರಿ, ಬ್ಯಾಕೋಡು, ಕಟ್ಟಿನಕಾರು ಭಾಗದ ಸಂಪರ್ಕ ಕೊಂಡಿಯಾಗಿದ್ದ ಲಾಂಚ್ ಸೇವೆ, ದಿನನಿತ್ಯದ ಓಡಾಟ, ಆರೋಗ್ಯ ಸೇವೆಗೆ ಲಾಂಚ್ ಸ್ಥಗಿತದಿಂದ ತೀವ್ರ ಹಿನ್ನಡೆ ಉಂಟಾಗಲಿದೆ.